Sunday, 29 May 2016

ತುಂಬಾ ನಾಟಿದ ಹಾಡು...

  ನಾವು ಹಾಡುಗಳನ್ನ ಬಹಳಷ್ಟು ಸಲ ಕೇಳಿರ್ತೀವಿ, ಆನಂದಿಸಿರ್ತೀವಿ. ಆದರೆ ಕೆಲವೊಮ್ಮೆ ಮಾತ್ರ ಅವುಗಳನ್ನ 'ಹೌದು' ಅಂತ ಒಪ್ಪಿಕೊಳ್ತೀವಿ, ಯಾವಾಗ ಅವು ನಮ್ಮ ಸ್ವಾನುಭವಕ್ಕೆ ಬರುತ್ತವೋ ಆಗ.
ಈಗ ತಾನೇ ಹಲವು ಬಾರಿ ಕೇಳಿದ್ದ ಈ ಹಾಡು ಈಗಷ್ಟೇ ಸ್ನಾನ, ಜಪ ತಪ ಪೂಜೆಯನ್ನ ಮುಗಿಸಿ, ಹೊಸ ಬಟ್ಟೆಯುಟ್ಟ ಶಿವಸಮಾನ ಸನ್ಯಾಸಿಯಂತೆ ಹೊಸ ರೂಪಿನಲಿ ನಿಂತು ಬೋಧಿಸಿತು. ನಿಮಗೂ ಆ ಹಾಡು ಅಷ್ಟೇನು ಅಪರಿಚಿತವಲ್ಲ, ಜಿ.ಎಸ್. ಶಿವರುದ್ರಪ್ಪ ಅವರ ಕವನ,
''ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆವು ನಮ್ಮೊಳಗೆ...''
ಹೌದು ತಾನೆ...
ಎಲ್ಲಿದ್ದಾನೆ ಭಗವಂತ?
ಮನುಷ್ಯರ ಕೈಗೆ ಸಿಗಬಾರದು ಅಂತ mobile network ಕೂಡ ಸಿಗದಿರೋ ಕೈಲಾಸ ವೈಕುಂಠಗಳಲ್ಲಿ ಸರಸವಾಡ್ತಾ ಕೂತಿದ್ದಾನಾ? 'ಒಂದೇ ಮನಸ್ಸಲ್ಲಿ ಕೂಗಿ ಕರೀಲಿ, ಅಲ್ಲೇ ಹಾಜರ್ ಹಾಕ್ತೀನಿ' ಅಂತ ಹಠ ಹಿಡಿದಿದ್ದಾನ? 'ಓ ಈ ಮೇಷ್ಟ್ರು ಕಳೆದ ಜನ್ಮದಲ್ಲಿ ರಾಜನ ಥರ ಮೆರೀತಿದ್ದ, so ಈ ಜನ್ಮದಲ್ಲಿ ಕಷ್ಟ ಪಡಲಿ' ಅಂತ ನಲವತ್ತಕ್ಕೇ ಕಣ್ಣು ಕಿತ್ಕೊಂಡು, ನಾಲ್ಕೈದು ಹೆಣ್ಣು ಮಕ್ಕಳನ್ನಕೊಟ್ಟು, costly ಔಷಧಿಯ ಕಾಯಿಲೆ ಕೊಡ್ತಾನ?
ಅಲ್ಲ, ನಮ್ಮಲ್ಲಿ ಕೆಲವು ಮನುಷ್ಯರಿದ್ದಾರೆ. ನಿನ್ನೆ ಮಾಡಿದ ಅಪಚಾರವನ್ನ ಇವತ್ತೇ ಮರೆತು ನಾಳೆ ಸಹಾಯ ಮಾಡುವಂಥವರು. ಅಂಥ ಬುದ್ಧಿ ಕೊಟ್ಟ ಭಗವಂತನೇ ಆ ಬುದ್ಧಿಯಿಲ್ಲದೆ ಈ ಥರ ವರ-ಶಾಪ-ಪರಿಹಾರ ಅಂತ 'ಹುಲಿ ಕಟ್ಟೆ' ಆಟ ಆಡ್ತಾನ್ಯೆ??
ಅದ್ಸರಿ, ಈ ದೇವರ concept ಏನು ಹೇಳಿ? ಪವಾಡ ಮಾಡೋದೇ? ಅಲ್ಲ. ಮತ್ತೇನು? ನಂಬಿ ಬಂದವರನ್ನ ಕಾಪಾಡೋದು. ಕೆಲವರು ಹೇಳುವಂತೆ, ಎಷ್ಟು ಸೇವೆ ಮಾಡ್ತಾರೋ ಆ ಸೇವೆಯ ಫಲಕ್ಕೂ ಮತ್ತು ಪಾಪಕರ್ಮಕ್ಕೂ ಸರಾಸರಿ ಅಳತೆ ಮಾಡಿ, ಅಷ್ಟು ಕಷ್ಟವನ್ನ ನಷ್ಟಗೊಳಿಸೋದು. ಅವನೇ ತಾನೆ ದೇವರು? ok. accepted. ಅಂಥ ದೇವರು ಗುಡಿಯೊಳಗೆ ಯಾಕೆ ಬಂಧಿಯಾಗಿರಬೇಕು? early morning to late night ತನಕ ಯಾಕೆ ಆ ಕತ್ತಲ ಕೋಣೇಲಿ, ಆ ಪೂಜೆ ಮಾಡೋನ ಜೊತೆಲಿ ಇರಬೇಕು? ಬರಲಿ ಬಿಡಿ ಹೊರಗೆ. ಭಕ್ತನೇ ಬಂದು ಹರಕೆ ಕಟ್ಟಿ ಹೋಗೋ ತನಕ ನಾನು ಸಹಾಯಕ್ಕೆ ಬರೊಲ್ಲ ಅನ್ನೊ ಮೊಂಡಾಟ ಯಾಕೆ ಹೇಳಿ ಈ ದೇವರಂಥಾ ದೇವರಿಗೆ??!!!
ಕಷ್ಟ ಮತ್ತೆ ಸುಖ ನಮಗೆ, ಅಂದರೆ, ಮನುಷ್ಯರಿಗೆ ಬೇರೆ ಬೇರೆ. ಆದರೆ ಭಗವಂತನಿಗೆ ಅವೆರಡೂ ಒಂದೆ. ಅವನಿಗೆ ಚೆನ್ನಾಗಿ ಗೊತ್ತಿದೆ, ಯಾರಿಗೆ ಯಾವ ಕಷ್ಟ ಅಥವಾ ಯಾವ ಸುಖ, ಯಾವಗ ಕೊಡಬೇಕು ಅಂತ. ನೆನಪಿಡಿ, ನೀವಿಗ ಕಷ್ಟದಲ್ಲಿದ್ದೀರಿ ಅಂದರೆ ಖುಷಿಪಡಿ, ನಿಮಗೆ ಇಷ್ಟರಲ್ಲೆ ಪರಮ ಸುಖ ಒದಗಿ ಬರಲಿದೆ. ಖುಷಿಯಾಗಿರುವವರು ಮುಂಬರಲಿರುವ ಕಷ್ಟಕ್ಕೆ ಈಗಲೇ ಎದೆಗಟ್ಟಿಮಾಡಿಕೊಳ್ಳಿ. ಎರಡೂ ಶಾಶ್ವತವಲ್ಲ, ಸುಖ as well as ದುಃಖ.
ಕ್ಷಮಿಸಿ, ಇದನ್ನೆಲ್ಲಾ ಹೇಳುವಷ್ಟು ಪ್ರೌಢ್ಯತೆ ನನಗಿಲ್ಲ. ಹೇಳಬಾರದು ಕೂಡ. ನಾನು ಹೇಳಬಂದದ್ದು G.S.S ಅವರು ದೇವರನ್ನ ಹೇಗೆ ಗುರುತಿಸಿದ್ದಾರೆ ಅಂತ. 'ಪ್ರೀತಿ ಮತ್ತು ಸ್ನೇಹ' ಇವೇ ಅಂತೆ ದೈವದ ಸ್ವರೂಪ. ಅಲ್ಲದೆ ಮತ್ತೇನು? ಅಮ್ಮನ ಪ್ರೀತಿ, ಅಪ್ಪನ ಸ್ನೇಹ. ಹೆಂಡತಿ ಪ್ರೀತಿ, ಮಕ್ಕಳ ಸ್ನೇಹ. ಹಿರಿಯರ ಪ್ರೀತಿ, ಗೆಳೆಯರ ಸ್ನೇಹ, ಇನ್ನೇನು ಬೇಕು ಹೇಳಿ ಆನಂದಮಯ ಜೀವನಕ್ಕೆ? ಎಂದಿಗೂ ಸಾಕೆನಿಸದ ಪ್ರೀತಿ, ಸತತವೂ ಬೇಕೆನಿಸುವ ಸ್ನೇಹ, ಇವುಗಳಿಗಿಂತಲೂ ಮಿಗಿಲಾದ್ದು ಎಷ್ಟು ಲಕ್ಷ ಕೋಟಿ ಕೊಟ್ಟರೆ ಸಿಕ್ಕೀತು ಹೇಳಿ. ಸರಿ, ಇದೆಲ್ಲವೂ ಎಲ್ಲರಿಗೂ ಸಿಕ್ಕೀತೆ? ಬಹುಶಃ ಎಲ್ಲರಿಗೂ ಸಿಗಲಾರದು. ಆದರೆ, ಸಿಕ್ಕಷ್ಟನ್ನಾದರೂ ಸಂತಸದಿಂದ ಅಪ್ಪಿಕೊಳ್ಳ ಬೇಕು. ಅವುಗಳನ್ನ ಅರಸುತ್ತ ಹೋಗುವುದೇ ಭಗವದನ್ವೇಷಣೆ. ಸಿಕ್ಕ ಮೇಲೆ ಮಿಕ್ಕವರಿಗೆ ಹಂಚುವುದೇ ವಿಮೋಚನೆ. ಇದೇ ತಾನೆ ಸನಾತನ ಪರಂಪರೆಯ ಆದರ್ಶ? ಪ್ರೀತಿಸುವುದು ಪ್ರತಿ ಮಾನವನ ಆದ್ಯ ಉದ್ದೇಶವಾಗಬೇಕು, ದೇಶಕಾಲಾತೀತವಾಗಿ.
ಹತ್ತಿರವಿದ್ದೂ ದೂರ ನಿಲ್ಲುವೆವು,
ನಮ್ಮ ಅಹಂಮಿನ ಕೋಟೆಯಲಿ,
ಎಷ್ಟು ಕಷ್ಟವೋ ಹೊಂದಿಕೆಯೆಂಬುದು,
ನಾಲ್ಕು ದಿನದ ಈ ಬದುಕಿನಲ್ಲಿ....
mostly ನಮ್ಮ ನೆಂಟ-ಅಥವಾ ಗೆಳಯನನ್ನ ಉದ್ದೇಶಿಸಿ ಬರೆದಿದ್ದಾರೇನೋ ಅನಿಸುತ್ತೆ ಅಲ್ವೆ? ಅಲ್ಲ, ಆ ಸಾಲು ಬರೆದಿರೋದು ನಮಗೆ. ನಾವೆ ಆ lineಗಳಿಗೆ ಹೋಲಿಕೆಯಾಗೋದು. ಬರೀ ಇನ್ನೊಬ್ಬರ ತಪ್ಪು, ಕೀಳು ಮನಸ್ಥಿತಿ, ಅವತಾರ, ಅವಂತರಗಳನ್ನ ಅವರಿಗೆ ಹೇಳಿಕೊಳ್ಳದೆ, ನಾವು ಅನುಭವಿಸದೆ, ಒಳಗೊಳಗೇ ಬೈದುಕೊಂಡು, ಅವರಿವರ ಹತ್ತಿರ ಆಡಿಕೊಂಡು ತಿರುಗಾಡ್ತೀವಲ್ಲ, ಹಾಗಾಗಿ ನಮಗೇ ಬರೆದ ಸಾಲು ಅದು. ಯಾರನ್ನಾದರು ದೂಷಿಸುವ ಮುನ್ನ ಆ ವ್ಯಕ್ತಿ ನೀವೇ ಆಗಿದ್ದರೆ ಬೈಕೋತಿದ್ರಾ ಅಂತ ಯೋಚಿಸಿ, ಇನ್ನೊಬ್ಬರು ಹೀಗೆ ಮಾಡ್ಬಿಟ್ರು ಅಂತ ಎಗರಾಡುವಾಗ ಅವರ ಜಾಗದಲ್ಲಿ ನೀವಿದ್ದಿದ್ರೆ ಏನು ಮಾಡ್ತಿದ್ರಿ ಯೋಚಿಸಿ. ಹಾಗೆ ಕಲ್ಪನೆ ಮಾಡಿಕೊಳ್ಳಿ, ನೀವು ದ್ವೇಷಿಸುವ ವ್ಯಕ್ತಿಗಳ ಅದೆಷ್ಟು ಗುಣದೋಷಗಳು ನಿಮ್ಮಲ್ಲೇ ನೀವು ಗುರುತಿಸಿಕೊಂಡಿಲ್ಲಾ? ಇಷ್ಟೆಲ್ಲ ಹೇಳುವ ನಾನೇನು ಸಾಚ ಅಲ್ಲ ಬಿಡಿ, ನಾನು ನಿಮ್ಮಂಥವನೆ. ಆದರೆ ಈಗ ಹೊಸದೊಂದು ದಾರಿ ತೊರಿಸಿಬಿಟ್ಟರು G.S.S.
ಶ್ರೀ ಶಾರದಾಮಾತೆ ಹೇಳಿದ್ದಾರೆ, ''ಪರರ ಅವಗುಣಗಳನ್ನ ಪರಿಗಣಿಸದಿರಿ'' ಅಂತ. ಇನ್ನುಮುಂದೆ ಕೇವಲ ಒಳಿತನ್ನೇ ಗ್ರಹಿಸುವ ಪ್ರಯತ್ನವನ್ನ ನಾನಂತೂ ಈಗಿಂದಲೇ ಸಂಕಲ್ಪ ಮಾಡ್ತೇನೆ. ನೀವು ಮಾಡಿ ಅಂತ ಹೇಳಲ್ಲ. ಮುಂದೆ, ಈ ಹಾಡು ನಿಮ್ಮ ಮೇಲೂ ಪ್ರಭಾವ ಬೀರದಿರದು ಅಂತ ನನಗೆ ಭರವಸೆ ಇದೆ...
ಜೀವನ ನಾಲ್ಕುದಿನದ್ದಂತೆ, ಹಗಲು- ಮಧ್ಯಾಹ್ನ-ಸಂಧ್ಯೆ ಇರಳುಗಳು ಒಂದೇ ದಿನದೊಳಗೆ ಇರುವಂತೆ. ಹೆಚ್ಚುಕಡಿಮೆ ನಮ್ಮ ಜೀವನದ ತಿಳಿ ಬೆಳಗು ಮರೆಯಾಗಿ, ಬಿಸಿಲು ನೆತ್ತಿಸುಡುವ ಹೊತ್ತು ಇದು. ಆಗಲಿ, ಕಷ್ಟಕ್ಕೆ ತಯಾರಾಗೋಣ. ಆಗ ಸುಖ ಬಂದರೂ manage ಮಾಡಬಹುದು. ಅಕಸ್ಮಾತ್ ಕಷ್ಟವೇ ಬಂತು ಅಂತ ಇಟ್ಕೊಳಿ, ಬರ್ತಾನೆ, ಗರ್ಭಗುಡಿಯ ನಿರ್ಭಂಧವನ್ನ ಮಡಿಬಟ್ಟೆಯಂತೆ ಮೂಲೆಗೊಗೆದ ಭಗವಂತ, ಯಾವುದೋ ಮನುಷ್ಯ ರೂಪ ಧರಿಸಿ....
ಇಲ್ಲಿದೆ ನಂದನ
ಇಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ...
''ಈಶಾವಾಸ್ಯಮಿದಂ ಸರ್ವಂ'' ಕಷ್ಟ ಸುಖ, ನೋವು ನಲಿವು, ಹುಟ್ಟು ಸಾವು ಎಲ್ಲವೂ ದೈವದ ಅಭಿವ್ಯಕ್ತಿಯೇ. ಎಲ್ಲವನ್ನೂ ಆನಂದಿಸೋಣ.
ನಾದೀ

No comments:

Post a Comment

ಊರ್ಮಿಳೆಯ ತಪಸ್ಸು!

ಊರ್ಮಿಳೆಯ ತಪಸ್ಸು..! ‘ಅಷ್ಟೇನಾ..? ಅಷ್ಟಾಕ್ಕೆ ಅಪ್ಪಾಜಿ ಹೀಗೆ ಚಿಂತಾಕ್ರಾಂತರಾದ್ರಾ? ಈಗೋ, ಇವತ್ತೇ, ಈಗಲೇ ಹೊರಟೆ. ನೀವೇನು ಯೋಚಿಸಬೇಡಿ. ಅಪ್ಪ ಕೊಟ್ಟ ಮಾತನ್ನ ...