Monday, 27 November 2017

ಊರ್ಮಿಳೆಯ ತಪಸ್ಸು!

ಊರ್ಮಿಳೆಯ ತಪಸ್ಸು..!

‘ಅಷ್ಟೇನಾ..? ಅಷ್ಟಾಕ್ಕೆ ಅಪ್ಪಾಜಿ ಹೀಗೆ ಚಿಂತಾಕ್ರಾಂತರಾದ್ರಾ? ಈಗೋ, ಇವತ್ತೇ, ಈಗಲೇ ಹೊರಟೆ. ನೀವೇನು ಯೋಚಿಸಬೇಡಿ. ಅಪ್ಪ ಕೊಟ್ಟ ಮಾತನ್ನ ಕಾಯಾವಾಚಾಮನಸಾ, ಶ್ರದ್ಧೆಯಿಂದಲೇ ನೆರವೇರಿಸ್ತೀನಿ’ ರಾಮ ಹಸನ್ಮುಖಿಯಾಗೇ ಹೇಳಿದ.

‘ಪಟ್ಟಾಭಿಷೇಕಕ್ಕೆ ನಿಗದಿಯಾದ ಮುಹೂರ್ತದಲ್ಲೇ, ವನವಾಸಕ್ಕೆ ಪ್ರಯಾಣ’ ಕೈಕೆ ಕಟುವಾಗಿ ಆಜ್ಞಾಪಿಸಿದಳು.

‘ಶುಭಲಗ್ನ, ಶುಭಪ್ರದ. ಬರ್ತೀನಿ ಚಿಕ್ಕಮ್ಮ’ ಅಷ್ಟು ಹೇಳಿ, ಪ್ರಜ್ಞೆ ತಪ್ಪಿ ಮಲಗಿದ್ದ ದಶರಥನ ಕಾಲುಮುಟ್ಟಿ ಆಚೆ ಬಂದ.

ಮಾತು ಮುಗಿಯುತ್ತಿದ್ದ ಹಾಗೇ, ಮಂಗಳವಾದ್ಯ ಮೊಳಗಿತು.

ಇಷ್ಟು ಹೇಳಿದ ರಾಮ, ಬಂದಷ್ಟೇ ಗಾಂಭೀರ್ಯದಿಂದ, ಕೋಪಗೃಹದಾಚೆ ನಡೆದು ಹೋದ. ಕೈಕೆಗೆ ರಾಮನ ಮಾತು ಸಿಡಿಲು ಹೊಡೆಸಿತ್ತು. ಅವಳು ರಾಮನ ಆ ನಿಸ್ಪೃಹತೆಯ ಛಡಿಯೇಟಿಗೆ ಮನದಲ್ಲೇ ಕುಸಿದು ಬಿದ್ದಿದ್ದಳು, ದಶರಥ ದೈಹಿಕವಾಗಿಯೂ ಕುಸಿದು ಕಣ‌್ಣೀರೇ ದೇಹವಾದಂತಿದ್ದ.

ರಾಮ ಆಚೆ ಬಂದಾಗ, ಅವನ ಕಣ್ಣಿಗೆ ಕೋಪೋದ್ರಿಕ್ತನಾಗಿದ್ದ ಲಕ್ಷ್ಮಣ ಕಂಡ.  ರಾಮನೊಟ್ಟಿಗೆ ಬರುವಾಗಲೂ, ಅಣ್ಣನಿಗೆ ಏನಾದರೂ ತೊಂದರೆಯಗಬಹುದಾ ಅನ್ನೋ ಅನುಮಾನ ಮೂಡಿತ್ತು. ಆದರೆ ಇಂಥದ್ದೊಂದು ಘನಘೋರ ಅನ್ಯಾವಾಗುತ್ತೆ ಅನ್ನೋ ಕಲ್ಪನೆಯೂ ಇರಲಿಲ್ಲ. ಲಕ್ಷ್ಮಣ, ಕಟಕಟ ಅಂತ ಹಲ್ಲುಮಸೆಯುತ್ತಿದ್ದ  ಸದ್ದು ಕೇಳಿಯೇ ಲಕ್ಷ್ಮಣನ ಅವೇಶ ಎಷ್ಟಿದೆ ಎಂಬುದು ರಾಮನಿಗೆ ಗೊತ್ತಾಯ್ತು. ಏನೂ ಮಾತಾಡದೆ, ಸಣ್ಣ ನಗೆ ನಕ್ಕು, ಹೆಗಲ ಮೇಲೆ ಕೈ ಹಾಕಿಕೊಂಡು, ಅಲ್ಲಿಂದ ಹೊರಬಂದ. ಲಕ್ಷ್ಮಣನ ಹೆಗಲ ಮೇಲಿದ್ದ ಕೈ ಕಂಪಿಸುತ್ತಿತ್ತು, ಲಕ್ಷ್ಮಣನ ಅವೇಶದ ರಭಸಕ್ಕೆ.
=-=-=-

‘ಓಂ ಭೂರ್ಭುಸ್ವಃ ತತ್ಸತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋಯೋನಃ ಪ್ರಚೋದಯಾತ್..’’

ಕೌಸಲ್ಯೆ ಶ್ರದ್ಧೆಯಿಂದ ಪಠಿಸುತ್ತಿದ್ದಳು, ಪಟ್ಟಪೀತಾಂಬರ ತೊಟ್ಟ ರಾಮ ಆಕೆಯ ಕೋಣೆಗೆ ಕಾಲಿಟ್ಟಾಗ. ರಾಮ ಬಂದದ್ದು ತಾಯ ಕರುಳಿಗೆ ತಿಳಿದಂತೆ ಕಾಣುತ್ತೆ, ಮೆಲ್ಲಗೆ ಕಣ್ಬಿಟ್ಟು ನೋಡಿದಳು, ತನ್ನ ಕುಲದೇವ ಸೂರ್ಯನಾರಾಯಣನೇ ದಿವ್ಯ ಪ್ರಭೆಯೊಂದಿಗೆ ಬಂದು ನಿಂತಂತೆ ಶೋಭಿಸುತ್ತಿದ್ದ, ತನ್ನ ಮಡಿಲಲ್ಲಿ ಆಡಿ ಬೆಳೆದ ರಾಮ. ತನ್ನೆರಡೂ ಕೈಗಳನ್ನೂ ಮೇಲತ್ತಿ, ‘ಶುಭಮಸ್ತು ರಾಮ..’ ಎಂದು ಇನ್ನೂ ಏನೋ ಹೇಳಲು ಮುಂದಾದಳು, ಅಷ್ಟರಲ್ಲಿ ರಾಮ ತನ್ನ ಮಾತಿಗಳನ್ನ ಆರಂಭಿಸಿದ.

‘ಅಮ್ಮಾ, ಅಪ್ಪಾಜಿ ಈಗ ಮುಖ್ಯವಾದ ಕೆಲಸವೊಂದನ್ನ ಒಪ್ಪಿಸಿದ್ದಾರೆ. ಅದನ್ನ ನಿರ್ವಹಿಸೋಕೆ ಏನಿಲ್ಲದಿದ್ದರೂ ನಿನ್ನ ಆಶಿರ್ವಾದವಂತೂ ಬೇಕೇ ಬೇಕು. ಅನುಗ್ರಹಿಸು.’ ಅಂತ ತುಟಿಯಂಚಲಿ ಮಧುನಗೆ ಸೂಸುತ್ತ ಹೇಳಿದ.

ರಾಮ, ರಾಜ್ಯಪಾಲನೆ ಬಗ್ಗೆ ಹೇಳುತ್ತಿದ್ದಾನೆಂದು ಭಾವಿಸಿದ ಕೌಸಲ್ಯೆ, ಸಂಭ್ರಮದಿಂದ ತಲೆಯಾಡಿಸಿದಳು, ಅದೇನು ಹೇಳು ಎಂಬಂತೆ. ರಾಮ ಹೇಳಲು ಶುರುವಿಟ್ಟ, ಕೌಸಲ್ಯೆ, ದೇವರ ಮುಂದಿದ್ದ ತಿಲಕವನ್ನ ಕೈಗೆತ್ತಿಕೊಂಡು ರಾಮನ ಹಣೆಗಿಡಲು ಮುಂದಾದಳು.

‘ಅಪ್ಪಾಜಿ, ಚಿಕ್ಕಮ್ಮ ಕೈಕೆಗೆ ಎರಡು ವರ ಕೊಟ್ಟಿದ್ದರಂತಲ್ಲಾ..?’, ಹೌದೆಂದು ಹೂಂಗುಟ್ಟಿದಳು ಕೌಸಲ್ಯೆ, ಹಣೆಗೆ ಕುಂಕುಮವಿಟ್ಟು, ಹುಬ್ಬುಗಂಟಿಕ್ಕಿ. ‘ಅದನ್ನ ಈಗ  ಕೇಳಿದರಂತೆ. ಅಪ್ಪಾಜಿಯೂ ನೀಡಲು ಮುಂದಾಗಿದ್ದಾರೆ, ಆದರೆ ಅವರ ಮಾತು ನಡೆಸೋ ಹೊಣೆ ಈಗ ನನ್ನ ಮೇಲಿದೆ. ಭರತನಿಗೆ ಪಟ್ಟಕಟ್ಟುತ್ತಾರಂತೆ…’ ಕೌಸಲ್ಯೆಯ ಕಣ್ಣಲ್ಲಿ ಹನಿಗೂಡಿತು. ‘ನಾನು ಜಟಾವಲ್ಕಧಾರಿಯಾಗಿ, ಹದಿನಾಲ್ಕುವರ್ಷ ವನವಾಸ ಅನುಭವಿಸಬೇಕಂತೆ..’ ಕೌಸಲ್ಯೆಯ ಕಣ್ಣು ಕೋಡಿಯೊಡೆದು ಧಾರಾಕಾರವಾಗಿ ಹರಿಯಲಾರಂಭಿಸಿತು. ದೇವಪೀಠದ ಮೆಟ್ಟಿಲಮೇಲೆ ಕುಸಿದು ಬಿದ್ದಳು.

ರಾಮನಿಗೆ ಗೊತ್ತಾಯ್ತು. ಇಲ್ಲೇ ಇದ್ದರೆ ಕೆಲಸ ಕೆಡುತ್ತೆ ಅಂತ. ಆಶಿರ್ವಾದ ಮಾಡಮ್ಮ ಅಂತ ಕಾಲಿಗೆ ಬಿದ್ದು, ಅಲ್ಲಿಂದ ಹೊ ಹೊರಟ. ಲಕ್ಷ್ಮಣನೂ ಅಷ್ಟು ಹೊತ್ತಿಗೆ ಕೌಸಲ್ಯೆಯ ಕೋಣೆ ಪ್ರವೇಶಿಸಿದ. ಕೌಸಲ್ಯೆ ಕೂಗಿದಳು. ‘ರಾಮ ನನ್ನನ್ನು ಒಂಟಿ ಮಾಡಿ ಹೋಗ್ಬೇಡಪ್ಪ. ನಿಮ್ಮಪ್ಪ ಸರಿ ಇಲ್ಲ. ಯೌವನದ ಹೆಣ್ಣಿಗೆ ಶರಣಾಗಿ, ಹೆತ್ತ ಮಗನನ್ನೇ ಕಾಡಿಗಟ್ತಾ ಇರೋ ಆ ಮನುಷ್ಯ, ಇನ್ನು ಹೆಂಡ್ತಿಗೆ ಅನ್ಯಾಯ ಮಾಡದೇ ಇರ್ತಾನಾ? ಆ ಸವತಿ ಸಾಮ್ರಾಜ್ಯಪಾಲನೆ ಮಾಡ್ತಿದ್ರೆ ನನಗೆ ಸುಖವಾದ್ರೂ ಇರುತ್ತಾ? ಹೋಗ್ಬೇಡ ನೀನು. ಹಾಗೂ ಹೋಗೋದಾದ್ರೆ ನನ್ನನ್ನೂ ಕರ್ಕೊಂಡು ಹೋಗು..’ ಆಕ್ರಂದಿಸಿದಳು.

‘ಅಮ್ಮಾ.. ಅಪ್ಪಾ ಇರುವಾಗ್ಲೇ ನೀನು ನನ್ನ ಜೊತೆ ಬರೋದು ಧರ್ಮವಲ್ಲ. ಅಲ್ಲದೆ ಭರತನೇನು ಕೆಟ್ಟವನಲ್ಲ. ನಿನ್ನನ್ನ ಹೆತ್ತಮ್ಮನಿಗಿಂತಲೂ ಹೆಚ್ಚಾಗಿ ನೋಡಿಕೊಳ್ತಾನೆ. ಅವನ ರಾಜ್ಯಪರಿಪಾನೆ ಬಗ್ಗೆ ತಲೆ ಕೆಡಿಸಿಕೊಳ್ಬೇಡ. ನನ್ನ ಧರ್ಮಕ್ಕೆ ಅಡ್ಡಿ ಬರಬೇಡ’ ಅಂತ ರಾಮ ಹೇಳುವಷ್ಟೂ ಹೊತ್ತು ಕೈಮುಗಿದೇ ಇದ್ದ. ಕೌಸಲ್ಯೆ ಪರಿಪರಿಯಾಗಿ ಕೇಳಿಕೊಂಡರೂ ರಾಮ ಕೇಳಲಿಲ್ಲ. ‘ಗಂಡ ಹೇಗಿದ್ದರೂ, ಎಲ್ಲಿದ್ದರೂ, ಒಂದು ವೇಳೆ ತಪ್ಪು ಮಾಡಿದರೂ ಅವನನ್ನು ಅನುಸರಿಸುವುದೇ ಪತ್ನಿ ಧರ್ಮ. ಜನ್ಮಕಾರಕನಾದ ತಂದೆ ಹೇಳಿದಂತೆ ನಡೆಯಬೇಕಾದ್ದು ಪುತ್ರಧರ್ಮ. ಈ ಎರಡೂ ಧರ್ಮಗಳನ್ನ ನಿನ್ನ ವಾತ್ಸಲ್ಯದ ಕತ್ತಿ ಎತ್ತಿ ಛಿದ್ರಿಸಬೇಡ. ಹರಸಮ್ಮ’ ಅಂದು ಅಲ್ಲಿಂದ ಹೊರಡುತ್ತಾನೆ, ಸೀತೆಯಿದ್ದ ಕೋಣೆಯೆಡೆಗೆ.
-=-=-=-=

ಹೋಗುವಾಗ ಲಕ್ಷ್ಮಣ ಆಕ್ರೋಶಭರಿತನಾಗಿ, ಕ್ರೋಧೋನ್ಮತ್ತನಾಗಿ ಹೇಳ್ತಾನೆ, ‘ಅಣ್ಣ, ನೀನು ಹೂ ಅನ್ನು, ಈಗಲೇ, ಈ ಕ್ಷಣವೇ ಆ ಮುದಿರಾಜನ ಕಥೆ ಮುಗಿಸಿಬಿಡ್ತೀನಿ. ಅವನ ಇಡೀ ಸೇನೆಯನ್ನೇ ಧ್ವಂಸಮಾಡಿ ನಿನಗೆ ಪಟ್ಟಕಟ್ತೀನಿ. ಆ ಚಪಲಚಿತ್ತ ಇಂಥಾ ಸಾಕೇತಪುರಿಗೆ ಅರಸನಾಗಿರ್ಬೇಕಾ? ಛೇ. ಅವನು ಅಪ್ಪನೇ ಅಲ್ಲ. ಧರ್ಮ ಧರ್ಮ ಅಂತೀಯಲ್ಲ, ಹಿರಿಮಗನಿಗೆ ಪಟ್ಟಕಟ್ಟೋದೇ ತಾನೇ ಧರ್ಮ? ಆ ಧರ್ಮ ನೆರವೇರಿಸೋಕೆ ನನಗೆ ಅವಕಾಶ ಕೊಡು. ಮಗನನ್ನು ಕಾಡಿಗಟ್ಟೋ ತಂದೆ ತಂದೆನೇ ಅಲ್ಲ. ಏನಂತಿಯಾ? ನಾನಿರ್ತೀನಿ. ನೀನು ರಾಜನಾಗು..’

ಲಕ್ಷ್ಮಣನ ಮಾತು ಮುಗಿಯೋ ಹೊತ್ತಿಗೆ, ಸೀತೆಯ ಅಂತಃಪುರದ ಹೊಸಿಲು ಬಳಿಗಿಬ್ಬರೂ ಬಂದಿದ್ದರು. ಕೋಪದಿಂದ ಕೆಂಪಾಗಿದ್ದ ಲಕ್ಷ್ಮಣನ ಗಲ್ಲ ಹಿಡಿದ ರಾಮ, ‘ಪಟ್ಟ ಕಟ್ತೀನಿ ಅಂದಾಗ ತಂದೆಯಾದವನು, ಕಾಡಿಗೆ ಹೋಗು ಅಂದಾಗ ತಂದೆಯಾಗದೇ ಇರ್ತಾನಾ? ಕಾಡಿಗೆ ಕಳಿಸ್ತಿರೋದು ಕೈಕೆಯೂ ಅಲ್ಲ, ರಾಜ ದಶರಥನೂ ಅಲ್ಲ. ವಿಧಿ.  ನೀನು ಹೋರಾಟ ಮಾಡಬೇಕಿರೋದು ವಿಧಿಯ ವಿರುದ್ಧ. ಅದು ಸಾಧ್ಯಾನಾ ಸೋದರ? ಸಾಧು... ಸಾಧು... ಈ ನಿನ್ನ ಕೋಪ ಸರಿಯಾದ್ದಲ್ಲ. ಕೋಪದಲ್ಲಿ ಯಾವ ಮಾತನ್ನೂ ಆಡಬಾರದು ಅಂತ ಹೇಳಿಲ್ವಾ ನಿಂಗೆ? ಹೋಗಿಬರ್ತೀನಿ’ ಅಂದು ಅಲ್ಲಿಂದ ಒಳನಡೆದ.
-=-=-=-=

ಸೀತೆ, ಸರ್ವಾಲಂಕಾರಭೂಷಿತಳಾಗಿ, ಸಾಕ್ಷಾತ್ ಶ್ರೀಲಕ್ಷ್ಮಿಯಂತೆಯೇ ಕಂಗೊಳಿಸುತ್ತಿದ್ದಳು. ಕನ್ನಡಿ ಮುಂದೆ ನಿಂತು, ಕಾಡಿಗೆ ತೀಡುತ್ತಿದ್ದವಳಿಗೆ, ರಾಮನ ಆಗಮನ ಕಂಡಿತು. ಜಯಘೋಷವಿಲ್ಲದೆ, ಹರ್ಷಚಿತ್ತವಿಲ್ಲದೆ, ಭಾರವಾಗಿ ಹೆಜ್ಜೆ ಇಡುತ್ತಾ ಒಳಬಂದ ರಾಮನನ್ನ ನೋಡಿ ಸೀತೆ ಗಾಬರಿಯಾದಳು. ‘ರೀ.. ಏನಿದು? ಯಾಕೆ ಹೀಗಿದ್ದೀರೀ? ಮಾವ ಕರೆದರು ಅಂತ ಹೋದ್ರಲ್ಲ, ಏನಂದರು?’ ಎಂದು ಅನುನಯದಿಂದ ಕೇಳಿದಳು. ರಾಮ ನಡೆದ್ದೆಲ್ಲವನ್ನೂ ಹೇಳಿದ. ಸೀತೆ ಕಂಗಾಲಾದಳು. ರಾಮ ರೇಷಿಮೆಯ ಶಾಲನ್ನು ತೆಗೆದು, ಮಂಚದ  ಮೇಲೆ ಎಸೆವಷ್ಟರಲ್ಲಿ, ಸೀತೆಯೂ ತನ್ನ ಕಂಠಾಭರಣಗಳನ್ನೊಂದೊಂದೇ ತೆಗೆದು ಕನ್ನಡಿ ಮುಂದಿನ ಮೇಜಿನ ಮೇಲೆ ಇಡತೊಡಗಿದಳು.

ರಾಮನಿಗೆ ಅಚ್ಚರಿಯಾಯ್ತು. ಏನೋ ಕಾದಿದೆ ಅನ್ನಿಸಿತು. ಕೇಳಿದ, ಯಾಕೆ ಹೀಗೆ ಮಾಡ್ತಿದ್ದೀ ಅಂತ. ಆಗ ಸೀತೆ,
‘ಅಯ್ಯೋ ಭಗವಂತ, ಕಾಡಲ್ಲಿ ಈ ಆಭರಣಗಳನ್ನಿಟ್ಕೊಂಡು ನಾನೇನು ತಾನೇ ಮಾಡೇನು? ಅದೂ ಅಲ್ಲದೆ, ನಾವು ಹೋಗ್ತಿರೋದು ಋಷಿ ಜೀವನ ನಡೆಸೋಕೆ. ಇದೆಲ್ಲಾ ಅಲ್ಯಾಕೆ ಬೇಕು ಹೇಳಿ’ ಅಂದಳು. ರಾಮ ನಿಜಕ್ಕೂ ನಡುಗಿದ. ಸೀತೆ ಅದಾಗಲೇ ವನವಾಸಕ್ಕೆ ಸಂಪೂರ್ಣ ಸಿದ್ಧಳಿರುವುದು ರಾಮನಿಗೆ ಗೊತ್ತಾಯಿತು.

‘ಅಯ್ಯೋ.. ಹೇ ಮಿಥಿಲಾಧಿಪತಿ ಮಗಳೇ, ನೀನು ರಾಣಿ, ಮಹಾರಾಣಿ, ಜನಕನ ಆಸ್ಥಾನದಲ್ಲಿ ಮೆರೆದವಳು. ಅಯೋಧ್ಯಾಪುರಿಗೆ ಅಧಿನಾಯಕಿ ನೀನು. ಹುಲ್ಲಿನ ಮೇಲೂ ಬರೀಗಾಲಲ್ಲಿ ನಡೆದವಳಲ್ಲ. ಬೇಡ, ಬರಬೇಡ. ಅರಣ್ಯವಾಸ ನಿನ್ನಂಥಾ ಕೋಮಲೆಗಲ್ಲ. ನೀನಿಲ್ಲೇ ಇರು. ಅಮ್ಮನ ಆರೈಕೆ ಮಾಡು. ಅಪ್ಪಾಜಿಗೆ ಶುಶ್ರುಷೆ ಮಾಡು. ಅವರಿಗೂ ವಯಸ್ಸಾಗಿದೆ. ಬಿಟ್ಟು ಹೋಗೋದು ಒಳ್ಳೇದಲ್ಲ…’ ರಾಮ ಹೆಚ್ಚೂಕಮ್ಮಿ ಬೇಡಿಕೊಳ್ಳುವವನಂತೆಯೇ ಹೇಳಿದ.

ಸೀತೆ, ಜಪ್ಪಯ್ಯಾ ಅಂದ್ರೂ ಇರೋದಿಲ್ಲ ಅಂತ ಕಟ್ಟುನಿಟ್ಟಾಗಿ ಹೇಳೇ ಬಿಟ್ಟಳು. ರಾಮನಿನ್ನೂ ಸೀತೆಯನ್ನು ಮನವೊಲಿಸುತ್ತಲೇ ಇದ್ದ, ಅಷ್ಟರಲ್ಲೇ ಸ್ವರ್ಣಾಭರಣವನ್ನೆಲ್ಲಾ ಕಳಚಿಟ್ಟು, ಅರಣ್ಯವಾಸಕ್ಕೆ ಯೋಗ್ಯವಾದ ಬಟ್ಟೆಗಳನ್ನ ಕಪಾಟಿನಿಂದ ಹೊರತೆಗೆಯುತ್ತಿದ್ದಳು. ರಾಮನ ಕಣ್ಣೂ ತುಂಬಿಬಂದಿತ್ತು, ಸೀತೆಯ ಹಠಕ್ಕೆ. ಆಗ ಸೀತೆ, ರಾಮನ ಹೆಗಲಿಗೆ ತಲೆಯಾನಿಸಿ ಹೇಳಿದಳು, ‘ಸ್ವಾಮಿ, ನನ್ನನ್ನ ಕರೆಯೋದೇ ನಿಮ್ಮ ಅರ್ಧಾಂಗಿ ಅಂತಲ್ಲವೇ? ನಿಮ್ಮ ದೇಹದ ಅರ್ಧಭಾಗವನ್ನೇ ಬಿಟ್ಟು ಹೋಗೋದು ಎಷ್ಟು ಸರಿ? ಅದಿರ್ಲಿ, ನಿಮ್ಮ ಮಾವ, ನಿಮ್ಮ ಕೈಯಲ್ಲಿ ನನ್ನ ಕೈಯಿರಿಸಿ ನಿಮಗೂ ನನಗೂ ಏನು ಹೇಳಿದ್ದರು ನೆನಪಿದೆಯಾ? ಒಬ್ಬರಿಗೊಬ್ಬರು ನೆರಳಾಗಿರಬೇಕು, ಎಂಥದ್ದೇ ಸಂದರ್ಭದಲ್ಲೂ ಬೇರಾಗಬಾರದು ಅಂದಿದ್ದರೋ ಇಲ್ವೋ? ಈಗ ನನ್ನನ್ನ ಬಿಟ್ಟು ನೀವಿರ್ತೀರಾ? ನೀವಿರ್ತಿರೇನೋ, ಆದರೆ, ನನ್ನಿಂದ ಸಾಧ್ಯವಿಲ್ಲ. ಈ ಕೊಂಪೆಯಲ್ಲಿ ನನ್ನನ್ನು ಒಂಟಿಮಾಡಬೇಡಿ..’ ಎಂದು. ರಾಮನ ಎದೆಯೆಲ್ಲಾ ಜಾನಕಿಯ ಕಂಬನಿಯಿಂದ ತೋಯ್ದಿತ್ತು. ರಾಮ ಇನ್ನೂ ಮಾತಾಡಲಿಲ್ಲ. ‘ರೀ.. ನೀವಿದ್ದರೆ ಅರಣ್ಯವೂ ನನಗೆ ಅರಮನೆಯೇ, ನೀವಿಲ್ಲದಿದ್ದರೆ ಅರಮನೆಯೂ ಅರಣ್ಯವೇ. ದಮ್ಮಯ್ಯ.. ಒಂಟಿ ಮಾಡಿ ಹೋಗ್ಬೇಡಿ..’ ಬಿಕ್ಕಳಿಸಿ ಅತ್ತಳು ಸೀತೆ. ರಾಮ ಸೋತ. ಸೀತೆಗೂ ಕಾಡಿಗೆ ಬರಲು ಸಮ್ಮತಿಸಿದ.
ಇಬ್ಬರೂ ಕೋಣೆಯಿಂದೀಚಿ ಬರುವಷ್ಟರಲ್ಲಿ, ’ಅಣ್ಣ, ನೀನು ಕೊಟ್ಟಿದ್ದ ಮಾತು ಮರೆತ್ಯಾ? ನೀನೆಲ್ಲೇ ಇದ್ದರೂ ನನ್ನನ್ನ ಬಿಟ್ಟು ಹೋಗೊದಿಲ್ಲಾಂತ ಮಾತು ಕೊಟ್ಟಿದ್ದೆ. ನಿನ್ನ ಮಾತನ್ನ ಉಳಿಸಿಕೋ ಮೊದಲು, ಆಮೇಲೆ ಬೇಕಿದ್ರೆ ಆ ಮುದುಕನ ಮಾತು ಕೇಳುವೆಯಂತೆ. ನಾನೂ ಹೊರಡ್ತೀನಿ. ನಿನ್ನ ಜೊತೆ ಅರಣ್ಯವಾಸಕ್ಕೆ ನಾನೂ ಬರ್ತಿದ್ದೀನಿ. ಇನ್ನೊಂದು ಮಾತಾಡಿದ್ರೂ ಸರಿಯಿರಲ್ಲ.’ ರಾಮನ ಯಾವ ಮಾತಿಗೂ, ಪ್ರತಿಕ್ರಿಯೆಗೂ ಲಕ್ಷ್ಮಣ ಕಾಯಲೇ ಇಲ್ಲ. ಥೇಟ್ ಆದಿಶೇಷನ ಹಾಗೆ ಬುಸುಗುಡುತ್ತಾ ಹೊರಟೇ ಬಿಟ್ಟ.
=--=-=

ಅಕ್ಕ ಭಾವನ ಖುಷಿಯನ್ನ ನೆನಪಿಸಿಕೊಂಡೇ ಊರ್ಮಿಳೆ, ಲಕ್ಷ್ಮಣನ ಹೆಂಡತಿ ಉಬ್ಬಿ ಹೋಗಿದ್ದಳು. ಸಾಲಂಕೃತಳಾಗಿ ಶುಭಮುಹೂರ್ತಕ್ಕಾಗಿ ಕಾಯುತ್ತಿದ್ದಳು. ಧಡಾರ್ ಅಂತ ಆಕೆಯ ಅಂತಃಪುರದ ಬಾಗಿಲು ಸದ್ದು ಮಾಡಿತು. ಮಂಚಕೊರಗಿ ಮಲಗಿದ್ದ ಊರ್ಮಿಳೆ ಧಿಗ್ಗನೆದ್ದು ಬಾಗಿಲ ಕಡೆ ನೋಡಿದಳು. ಮದ್ದಾನೆ ದಾಳಿಯಿಡುವಷ್ಟು ರಭಸವಾಗಿ ಹೆಜ್ಜೆ ಇಡುತ್ತಾ ಬಂದ ಲಕ್ಷ್ಮಣ. ಊರ್ಮಿಳೆಗೆ ಒಳಗೊಳಗೇ ಭಯ, ಮೊದಲೇ ಕೋಪಿಷ್ಟ, ಯಾರಜೊತೆ ಏನು ಕಿತ್ತಾಡಿದನೋ ಎಂದು ಚಡಪಡಿಸಿದಳು. ಏನಾಯಿತೆಂದು ಕೇಳುವಷ್ಟರಲ್ಲಿ, ’ಊರ್ಮಿ, ನಾನಿರಲ್ಲ, ಇನ್ನು ಹದಿನಾಲ್ಕು ವರ್ಷ, ಅಣ್ಣನಿಗೆ ವನವಾಸ ಪ್ರಾಪ್ತಿಯಾಯ್ತು. ಆ ದುಷ್ಟೆ, ದುರುಳೆ, ಆ ಮಹಾಮೋಸಗಾತಿ ಕೈಕೆ, ರಾಮನ ಪಟ್ಟವನ್ನೂ ಕಿತ್ಕೊಂಡಳು, ಅವನ ಅದೃಷ್ಟವನ್ನೇ ಲಪಟಾಯಿಸದಳು. ಛೀ. ಇನ್ನವಳ ಮಗ ರಾಜ್ಯಭಾರ ಮಾಡ್ತಾನೆ. ನಾನು, ಅಣ್ಣ, ಅತ್ತಿಗೆ ಮೂವರು ವನವಾಸಕ್ಕೆ ಹೋಗ್ತಿದ್ದೀವಿ.’ ಎಂದು ಹೇಳಿ, ಕಿರೀಟ, ವಜ್ರಕವಚ, ಎಲ್ಲವನ್ನೂ ಒಂದು ಮಾತಿಗೊಂದರಂತೆ ಕಿತ್ತೆಸೆಯುತ್ತಾ, ಬಂದಷ್ಟೇ ವೇಗವಾಗಿ ಹೋಗಿಬಿಟ್ಟ.

ಊರ್ಮಿಳೆ ನಿಂತಲ್ಲೇ ಕಲ್ಲಾದಳು. ಕೈಕಾಕಲೇ ಆಡಲಿಲ್ಲ. ಅವಳಿಗೆ ಏನಾಗುತ್ತಿತೆ ಎಂಬುದೇ ಅರ್ಥವಾಗಲಿಲ್ಲ. ಒಂದು ಘಳಿಗೆ ಗರಬಡಿದವಳಂತೆ ನಿಂತಿದ್ದವಳು, ಓಟಕಿತ್ತಳು, ಸುಮಿತ್ರೆಯ ಅಂತಃಪುರ ಹೊಕ್ಕಳು. ಅಲ್ಲಿ ಸುಮಿತ್ರೆ ಇರಲಿಲ್ಲ. ಬಡಬಡ ಅಂತ ಕೈಕೆಯ ಮಂದಿರಕ್ಕೆ ಹೋದಳು, ಅಲ್ಲಿದ್ದಳು ಸುಮಿತ್ರೆ, ಮೂರ್ಛೆ ಬಿದ್ದಿದ್ದ ಕೈಸಲ್ಯೆಯ ತಲೆಸವರುತ್ತಾ…
=-=-

ಊರ್ಮಿಳೆಗೆ ಏನಾಗಿದೆ, ಏನಾಗುತ್ತಿದೆ, ಎಲ್ಲವೂ ಸ್ಪಷ್ಟವಾಯ್ತು. ವನವಾಸ ಬಂದಿದ್ದು, ರಾಮನಿಗಲ್ಲ, ತನಗೆ ಎಂದು ಈಗಂದುಕೊಂಡಳು ಊರ್ಮಿಳೆ. ತಾನೂ ಲಕ್ಷ್ಮಣನ ಜೊತೆ ಹೋಗಲೇ ಎಂದುಕೊಂಡಳು, ಅಷ್ಟರಲ್ಲಿ ಸುದ್ದಿ ಬಂತು, ಸೀತಾರಾಮ ಲಕ್ಷ್ಮಣರು ಅಯೋಧ್ಯೆಯನ್ನು ಬಿಟ್ಟಿದ್ದಾರೆ, ಧನಕನಕವನ್ನೆಲ್ಲಾ ಹಂಚಿ ಕಾಡಿನ ಕಡೆ ಹೋಗಿದ್ದಾರೆ ಅಂತ.
ಊರ್ಮಿಳೆ, ತನ್ನ ದೌರ್ಭಾಗ್ಯಕ್ಕೆ ತನ್ನನ್ನೇ ಶಪಿಸಿಕೊಂಡಳು.

‘‘ಅಯ್ಯೋ ದುರ್ವಿಧಿಯೇ, ಎಂಥಾ ಕೆಲಸ ಮಾಡಿಬಿಟ್ಟೆ. ತುಂಬಿದ ಮನೆಯನ್ನೇ ಹೊಡೆದು ಹಾಕಿದೆಯಲ್ಲಾ.. ಕೈಕೇ, ನೀನು ಕೇಳೀದ್ದು ವರವಲ್ಲ ಶಾಪ. ಇನ್ನು ಸಾಕೇತಪುರಿ ಸ್ಮಶಾಣ ನಗರಿ ಅಷ್ಟೆ. ಈ ಅರಮನೆಯ ತುಂಬಾ ಇನ್ಮುಂದೆ ಪಿಶಾಚಿಗಳೇ ಓಡಾಡುತ್ತವೆ ಹೊರತು, ಮನುಷ್ಯರಲ್ಲ. ರಾಮನ ಪಟ್ಟಾಭಿಷೇಕ, ಎಂಥಾ ಸುವಾರ್ತೆಯಿದು! ಈ ಮಾತನ್ನ ಭಾವನೋ, ದಶರಥನೋ, ಇಲ್ಲ ಕೌಸಲ್ಯೆಯೋ ನೇರವಾಗಿ ಕೈಕೆಯ ಕಿವಿಗೆ ಹಾಕಬಾರದಿತ್ತೆ! ಆ ಕುಬ್ಜೆ ಮಂಥರೆಯಲ್ಲದೆ ಮತ್ಯಾರೇ ಈ ಸುದ್ದಿ ಮುಟ್ಟಿಸಿದ್ದರು ನನಗೀ ಶಾಪ ತಟ್ಟುತ್ತಿರಲಿಲ್ಲ. ಪತಿದೇವ, ಅಣ್ಣನ ಮೇಲಿರುವಷ್ಟು ಪ್ರೀತಿಯಲ್ಲಿ ಕಿಂಚಿತ್ತಾದ್ರೂ ಕಾಳಜಿ, ಕಟ್ಕೊಂಡ ಹೆಂಡತಿ ಮೇಲೆ ನಿನಗಿಲ್ಲವೇ? ನನ್ನೂ ಒಂದು ಮಾತು ಕರೆದಿದ್ದರೆ, ಬರೀ ಕಣ್ಸನ್ನೆಯಲ್ಲಿ ಬಾ ಎಂದಿದ್ದರೂ, ನಿನ್ನ ಪಾದಧೂಳಂತೆ ಹಿಂದಿಂದೆ ಓಡಿಬರುತ್ತಿರಲಿಲ್ಲವೇ? ಅಕ್ಕಾ, ಸೀತಕ್ಕಾ, ನೀನೇ ಅದೃಷ್ಟವಂತೆ ಕಣೆ, ನಾನೂ ನಿನ್ನ ಹಾಗೆ ಅಪ್ಪನ ಹತ್ತಿರವೇ ಬೆಳಿಬೇಕಿತ್ತು. ಆಗ ನಿನ್ನಷ್ಟೇ ಮಾತುಗಾರ್ತಿಯಾಗ್ತಿದ್ದೆ. ಮಾತಲ್ಲೇ ಗಂಡನ ಮನಗೆದ್ದು ವನವಾಸಕ್ಕೆ ಹೋದೆಯಲ್ವಾ? ಹೋಗು ಹೋಗು, ಪತಿಪ್ರೇಮ ಪಡೆದ ಪುಣ್ಯವತಿ ನೀನು. ಅಲ್ವೇ ಅಕ್ಕಾ, ನಿನ್ನ ಮೈದುನ ಬರುವಾಗ, ಒಂದೇ ಒಂದು ಮಾತು ಹೇಳಬೇಕಿತ್ತು ತಾನೇ? ಅಯ್ಯಾ ಲಕ್ಷ್ಮಣ, ಊರ್ಮಿ ಏನಾದ್ರೂ ಬರ್ತಾಳ ಕೇಳೀ ನೋಡಯ್ಯಾ ಅಂತ… ಅವನಿಗೆ ಅಣ್ಣ ಬೇಕು. ನಿನಗೆ ಗಂಡ ಬೇಕು. ನಾನ್ಯಾರಿಗೆ ಬೇಕು ಹೇಳು..? ಎಲ್ಲರೂ ಮರೆತು ಕೂತ ಪಾತ್ರ ನಾನು… ಹದಿನಾಲ್ಕು ವರ್ಷ…ಅಬ್ಬಾ.. ಹದಿನಾಲ್ಕು ವರ್ಷ… ಹೇಗಿರಲಿ? ಪ್ರಾಣೇಶನ ತೊರೆದು ಹೇಗೆ ಜೀವಿಸಲಿ? ಇಲ್ಲೇ, ಇದೇ ಅಂತಃಪುರದಲ್ಲೇ ಶುದ್ಧ ತಪಸ್ವಿನಿಯಾಗಿರ್ತೀನಿ. ನನ್ನ ಗಂಡನ ತಪಸ್ಸು ಮಾಡ್ತಲೇ ಇರ್ತೀನಿ…ಮನೆಸೊಸೆ ಇದಕ್ಕಿಂತ ಹೆಚ್ಚೇನು ಮಾಡಬಲ್ಲಳು. ಓ ಪತಿದೇವ, ನಿನ್ನಮ್ಮಂದಿರ ಸೇವೆಯ ಭಾಗ್ಯ ಕೊಟ್ಟೆಯಲ್ಲಾ ಅಷ್ಟು ಸಾಕು, ಕೆಟ್ಟು ತವರು ಸೇರದಿದ್ದರೆ ಅದೇ ಸೌಭಾಗ್ಯ… ನಿನಗೆ ಜಯವಾಗಲಿ, ನಿನ್ನ ಪ್ರೀತಿಪಾತ್ರರೇ ಧನ್ಯರು. ನಿನ್ನ ಅಭಿಮಾನವಿದ್ದವರಿಗೆ ಕಷ್ಟವೆಂಬುದೇ ಇಲ್ಲ. ಆದರೆ ನಿನ್ನ ಪ್ರೇಮಿಸುವ ನನಗೇ ಅಷ್ಟಅನಿಷ್ಟಗಳು ಬಂತೇ! ಬರಲಿ… ಬರಲಿ ಬಿಡು… ಪ್ರೀತಿಸುವಾತ ನೋವನ್ನಲ್ಲದೆ ಮತ್ತೇನನ್ನು ತಾನೇ ಬಳುವಳಿಯಾಗಿ ನೀಡಬಲ್ಲ? ಆದರೆ ಅದರ ನೋವೇ  ಪ್ರೀತಿಯ ಸಂಕೇತವಾಗಿರುತ್ತದೆ… ಇಗೋ, ನಿನ್ನ ಹೆಂಡತಿ, ಜನಕಜೆ, ಊರ್ಮಿಳೆ, ನಿನ್ನ ಪ್ರೇಮಯಾಗದ ಸಮಿತ್ತಿನಂತಿಲ್ಲಿ, ಈ ಮಹಾರಣ್ಯಕ್ಕಿಂತಲೂ ಘೋರಕಾನನವಾದ ಈ ಅಯೋಧ್ಯೆಯ ಅರಮನೆಯಲ್ಲಿ ನಿತ್ಯದಹಿಸಿಕೊಳ್ಳುತ್ತಲೇ ಇರುತ್ತಾಳೆ.. ನೀನು ಕ್ಷೇಮವಾಗಿ ಬಂದ ದಿನ ನಿನ್ನ ಸೇವಾನಿರತಳಾಗುತ್ತಾಳೆ…’’
-ನಾದೀ

Friday, 12 May 2017

ಅಲ್ಲಿ ದೇವರಿರಲಿಲ್ಲ..!

ಅಲ್ಲಿ ದೇವರಿರಲಿಲ್ಲ..!

ಅದು ಆ ಊರಿನ ಕೊನೆಯ ಬೀದಿಯ ಕಡೆಯ ಮನೆ. ಅಲ್ಲಿಗೆ ಹೋದವನು ಪತಿತ. ಮರ್ಯಾದಸ್ಥರ ಪಾಲಿಗೆ, ಆ ಮನೆಯ ಕಡೆ ತಲೆ ಇಟ್ಟು ಮಲಗೋದು ಸಹ ನಿಶಿದ್ಧ. ಆ ಮನೆಯಲ್ಲಿದ್ದವಳು, ಬೆಳ್ಳಿ.

ಇಂಥಾ ಮನೆಯಿದ್ದ ಊರಿನಲ್ಲೇ ಶ್ರೀರಾಮನ ದೇವಾಲಯವಿತ್ತು. ಅಲ್ಲಿ ತಲೆಮಾರುಗಳಿಂದಲೂ ಐನೋರ ವಂಶಸ್ಥರೇ ಪೂಜೆ ಮಾಡಿಕೊಂಡು ಬಂದಿದ್ದರು. ರಾಮಯ್ಯನೋರು ಹೇಳೋ ಪ್ರಕಾರ, ಅವರಜ್ಜನ ಕಾಲದಲ್ಲಿ ಇಲ್ಲಿಗೆ ಸಪ್ತರ್ಷಿಗಳು ಬಂದು ರಾಮನ ಪೂಜೆ ಮಾಡ್ತಿದ್ರಂತೆ. ಅವರಜ್ಜನ ಕಾಲದಲ್ಲೂ ಈ ಮಾತು ಅಂತಕಂತೆಯಾಗಿಯೇ ಇತ್ತು! ಅವತ್ತು ಸಪ್ತರ್ಷಿಗಳು ಬಂದಿದ್ದರೋ, ಇಲ್ಲವೋ ಗೊತ್ತಿಲ್ಲ. ಆದರೆ ಈಗ, ಹಾಗಂದುಕೊಂಡು ಹತ್ತಾರು ಊರುಗಳಿಂದ ಭಕ್ತರು ಬರುತ್ತಿದ್ದರು.
   
ರಾಮಯ್ಯನೋರು ತುಂಬಾ ಸಭ್ಯಸ್ಥರು. ಊರಲ್ಲಿ ಯಾರ ಮನೆಯಯಲ್ಲಾದರು ಪುರುಡಾದರೆ, ರಾಮಯ್ಯನೋರ ಮಾರ್ಗದರ್ಶನದಲ್ಲೇ ಮನೆಮಂದಿ ನಡಿಬೇಕು. ಯಾರಾದರೂ ನೆಗದುಬಿದ್ದರೆ, ಅವರ ಪಿತೃಗಳಿಗೆ ಪಿಂಡ ಇಡೋದಕ್ಕೂ ರಾಮಯ್ಯನೋರೆ ಬೇಕು. ಕೆಲವು ಸಲ, ಮದುವೆ ಮಂಟಪದಲ್ಲಿ ಗಟ್ಟಿಮೇಳದ ಸದ್ದು ನಿಲ್ಲುತ್ತಿದ್ದ ಹಾಗೇ, ಸ್ಮಶಾನದಲ್ಲಿ ಕಾಯುತ್ತಿದ್ದ ಹೆಣಕ್ಕೆ ಮುಕ್ತಿ ಕಾಣಿಸಬೇಕಿತ್ತು.  ಒಟ್ಟಾರೆ ರಾಮಯ್ಯನೋರದ್ದು ಅವಿಶ್ರಾಂತ ಬದುಕು. ಇಂಥಾ ಕಾರ್ಯದೊತ್ತಡದ ಮಧ್ಯಯೇ ಸುರೇಶ, ಮಹೇಶ, ವಿಜಯ, ಗಿರೀಶ ಅನ್ನೋ ಮೂರು ಗಂಡು ಒಂದು ಹೆಣ್ಣಿಗೆ ಜನ್ಮ ನೀಡಿದ್ದರು. ತಲೆತುಂಬಾ ಹುಡುಕಿದರೂ ಕರಿಗೂದಲು ಕಾಣದ ರಾಮಯ್ಯನೋರಿಗೆ ಈಗ ವಯಸ್ಸು ಐವತ್ತೋ ಐವತ್ತೈದೋ ಅಷ್ಟೆ. ಇಷ್ಟು ವರ್ಷದಲ್ಲಿ ಸತ್ಯವನ್ನಲ್ಲದೆ ಮತ್ತೇನನ್ನೂ ಹೇಳಿರಲಿಲ್ಲವಂತೆ ರಾಮಯ್ಯನೋರು. ಈ ಮಾತನ್ನು ಖುದ್ದು ದೇವಾಲಯದ ಖಚಾಂಜಿಯೇ ಹೇಳಿದ್ದರು.
   
ಹೀಗೆ, ದಿನನಿತ್ಯದ ಪರಿಪಾಠದ ಹಾಗೆ, ಅವತ್ತೂ ಕೂಡ ಊರಿನ ಪ್ರಮುಖರೆಲ್ಲಾ ರಾಮಮಂದಿರದ ಜಗುಲಿಯಲ್ಲಿ ಕೂತು, ಆಗಷ್ಟೇ ಪ್ರಚಾರ ಪಡೀತಿದ್ದ ಕುಟುಂಬ ಕಲ್ಯಾಣ ಯೋಜನೆ ಬಗ್ಗೆ ಮಾತಾಡುತ್ತಿದ್ದರು.
“ಅಲ್ಲಪ, ಇನ್ಮುಂದೆ ಎಲ್ಡೇ ಮಕ್ಳು ಅಮ್ತಲ್ಲಪ ಎಲ್ಲಾರ್ಗುವೆ? ಜಾಸ್ತಿ ಆದ್ರೆ ಏನ್ ಮಾಡ್ತರೆ?”
“ಇನ್ಯಾತ್ ಮಾಡ್ತಾರೆ? ಅಮ್ಮಮ್ಮಾ ಅಂದ್ರೆ ಜುಲ್ಮಾನೆ ಆಕ್ಬೋದು ನೋಡು”
“ಅಲ್ಲ, ಇದ್ದುಕ್ಕಿದ್ದಂಗೆ ಇದುನ್ಯಾಕ್ ಮಾಡುದ್ರೋಪಾ? ಮನೆತುಂಬ ಮಕ್ಳಿರ್ಬೇಕು ತಾನೆ? ಏನ್ ಸರ್ಕಾರನ ಸಾಕ್ತೈತೆ?”
“ಅಂಗಲ್ವೋ, ನಾಕ್ನೇ ಹೆರ್ಗೆಗೆ ತವಿರಿಗೋದ್ಲಲ್ಲ, ಈರಿ ಎಂಡ್ತಿ ಗಂಗಮ್ಮ, ಸತ್ತಿದ್ಯಾಕೇಳು? ಮಗು ಹಡ್ಯಕ್ ಶಕ್ತಿನೇ ಇರ್ಲಿಲ್ವಂತೆ. ಇಂಗೆ ನಮ್ದೊಂದೂರಗೇ ಎಷ್ಟ್ ಜನ ಸತ್ತಿಲ್ಲ ನೀನೇ ಯೇಳು..?  ಇನ್ನು ಇಡೀ ದೇಶ್ದಗೆ ಎಷ್ಟ್ ಜನ್ರೋ..?!”
“ಹೂಂ, ಅದೂ ಅಲ್ದೆ, ಹುಟ್ದೋರಿಗೆಲ್ಲಾ ಮನೆ-ಕೆಲ್ಸ ಎಲ್ಲಾ ಬೇಕಲಪಾ, ಎಲ್ಲಿಂದ ತರಾದು? ಸುಮ್ಕಿರು, ಅದ್ಯಾತ್ ಮಾಡ್ತಾರೋ ಮಾಡ್ಲಿ.”
ಇನ್ನೂ ಏನೇನೋ ಮಾತುಗಳು ಅಲ್ಲಿ ಹಾದುಹೋಗುತ್ತಿದ್ದವು. ಆಗಲೇ, ಎಲ್ಲರ ಮಾತೂ ಅವರೋಹಣಕ್ಕಿಳೀತು. ಎಲ್ಲರ ಕಣ್ಣುಗಳು ಒಂದೇ ಕಡೆ ನೆಟ್ಟವು. ನಿಗಿನಿಗಿ ಕೆಂಡಕಾರುವ ಕೆಂಪು ಸೀರೆಯುಟ್ಟಿದ್ದ ಬೆಳ್ಳಿ ಆ ಜಗುಲಿ ಕಡೆ ಬಂದಳು…

ಎಲ್ಲರೂ ಒಂದರೆ ಕ್ಷಣ ಗಾಬರಿಯಾದರು. ಬೆಳ್ಳಿ, ಊರೊಳಗೆ ಬರೋದು ತುಂಬಾ ಅಪರೂಪ. ಅಪರೂಪವೇನು ಬಂತು, ಬರೋದೇ ಇಲ್ಲ. ಅಂಥವಳು ನೇರವಾಗಿ ದೇವಸ್ಥಾನಕ್ಕೇ ಬರುತ್ತಿದ್ದಾಳೆ. ಅಲ್ಲಿ ಕೂತಿದ್ದವರಲ್ಲಿ ರಾಮಯ್ಯನವರನ್ನ ಬಿಟ್ಟರೆ, ಮಿಕ್ಕೆಲ್ಲರೂ ಅವಳ ಮನೆಯಲ್ಲಿ ಊಟ ಮಾಡಿದವರೆ. ಆದರೆ ಸಭ್ಯ ಸಮಾಜದವರಂತೆ ತೋರಿಸಿಕೊಳ್ಳಲು, ಬೆಳ್ಳಿ ಅಂದರೆ ಇವಳೇ ಅಂತಲೂ ಗೊತ್ತಿಲ್ಲದ ಹಾಗೆ ಕೂತಿದ್ದರು.

ಎಲ್ಲರಿಗೂ ಭಯ, ಬೆಳ್ಳಿ ಎಲ್ಲಿ ತಮ್ಮ ಬಗ್ಗೆ ಏನು ಮಾತಾಡಿಬಿಡುತ್ತಾಳೋ ಅಂತ. ಆದರೆ ಬೆಳ್ಳಿ ಬಂದ ಕಾರಣವೇ ಬೇರೆ ಇತ್ತು. ಬೆಳ್ಳಿಯನ್ನು ಜನರು ಅಪರಿಚಿತಳಂತೆ ನೋಡೋ ಮುನ್ನವೇ ಬೆಳ್ಳಿ ಅವರನ್ನ ಕಾಲಕಸದಂತೆ ಅಸಡ್ಡೆ ಮಾಡಿಯಾಗಿತ್ತು. ಅವಳು ಬಂದದ್ದು, ರಾಮಯ್ಯನೋರನ್ನ ಮಾತಾಡಿಸೋದಕ್ಕೆ. ಕಂಬಕ್ಕೆ ಅಂಟಿ ಕೂತಿದ್ದ ರಾಮಯ್ಯನೋರ ಮುಂದೆ ಕೈಮುಗಿದ ಬೆಳ್ಳಿ,
“ಸೋಮಿಗಳೇ, ನಾನು ಏನು ಅಂತ ನಿಮಿಗೊತ್ತೈತೆ. ಯೇಳಿ, ನನ್ ಪಾಲಿಗೆ ದೇವ್ರಿದಾನೋ ಇಲ್ಲೋ?”
“ದೇವರಿಗೆ ಎಲ್ರೂ ಮಕ್ಳೇ. ನೀನ್ ಏನಾದ್ರೆ ಅವನಿಗೇನು? ನಿನ್ ತವ ಭಕ್ತಿ ಐತಾ? ಸಾಕು. ನಿಂಗ್ ದೇವ್ರಿದಾನೆ.”
“ಅಂಗಾರೆ, ನಾನು ದೇವ್ರ್ ಪೂಜೆ ಮಾಡ್ಬೋದ?”
“ಈ ಗುಡಿಲಾ?” ದಿಗ್ಭ್ರಾಂತರಾಗಿ ಕೇಳಿದರು ರಾಮಯ್ಯನೋರು.
“ಈ ಗುಡಿಯೊಳಕ್ಕೆ ನನ್ ಪಾದಾನು ಇಕ್ಕಲ್ಲ ಸೋಮಿ. ನನ್ಗೆ ಕ್ರುಷ್ಣನ್ನ ಪೂಜೆ ಮಾಡೋ ಆಸೆ ಆಗೈತೆ. ನಂಗ್ ಪೂಜೆ ಗೀಜೆ ಬರಲ್ಲ. ಒಂದೇ ಒಂದಪ, ನೀವ್ ಪೂಜೆ ಮಾಡ್ ತೋರ್ಸಿ. ನಾನ್ ಕಲ್ತ್ಕತೀನಿ. ದಮ್ಮಯ್ಯ” ಅಂದು ಕೈಮುಗಿದಳು. ಅವಳ ಕಂಗಳಲ್ಲಿ ನೀರು ತುಂಬಿಕೊಂಡಿತ್ತು.

ಆದರೆ ಈ ಮಾತಿಗೆ ಒಪ್ಪಿಗೆ ಕೊಡೋದು ಹೇಗೆ? ತಾನು ಆ ಕೊನೆಮನೆಗೆ ಹೋಗಿ, ಪೂಜೆ ಮಾಡಿಸೋದೆ? ಎಲ್ಲಾದರೂ ಉಂಟೆ? ಹಾಗಂತ, ಭಕ್ತೆಯನ್ನ ನಿರಾಸೆಗೊಳಿಸಿದರೆ ಭಗವಂತ ಮೆಚ್ಚಿಯಾನೆ? ಇದಕ್ಕೆ ಉತ್ತರ ಹೇಳೋದಕ್ಕೆ ರಾಮನೇ ಬರಬೇಕು. ಆದರೆ ಅವನು ಬರಲಾರ, ಯಾಕೆಂದರೆ, ಇಲ್ಲೀ ತನಕ ಯಾವತ್ತೂ ಅವನು ಗರ್ಭಗುಡಿ ಬಿಟ್ಟು ಆಚೆ ಬಂದಿಲ್ಲ.

ಐನೋರ ದೃಷ್ಟಿ ಊರಿನ ಹಿರಿಯರ ಕಡೆ ಹೊರಳಿತು. ಅರ್ಧ ಜನ ಬೇಡ ಅಂತ ತಲೆಗುಣುಕು ಹಾಕಿದರು. ಉಳಿದರ್ಧ ಜನ ಹೋಗಿ ಬನ್ನಿ ಅಂತ ತಲೆಯಾಡಿಸಿದರು. ರಾಮಯ್ಯನೋರು ತಮ್ಮ ಮನಸ್ಸು ಬಯಸಿದ್ದ ಫಲಕ್ಕೇ ತೂಕ ಹೆಚ್ಚಿಸಿ, ಪೂಜೆ ಹೇಳಿಕೊಡೋಕೆ ಒಪ್ಪಿದರು.

ಮಾರನೇ ದಿನ. ಗುಡಿಯ ಪಕ್ಕದಲ್ಲಿ, ರಾಮಯ್ಯನೋರು ಬೆಳ್ಳಿಗೆ ಪೂಜೆ ಮಾಡೋದನ್ನ ಹೇಳಿಕೊಡ್ತಿದ್ದರು. ಪಕ್ಕದಲ್ಲಿ ಕಿರಿಯ ಮಗ ಗಿರೀಶನೂ ಇದ್ದ. ಭಗವಂತ ಮಂತ್ರಗಿಂತ್ರಕ್ಕೆಲ್ಲಾ ಒಲಿಯುವವನಲ್ಲ. ಯಾವ ಮಂತ್ರ ಹೇಳಿದ್ದ ಅಂತ ಅರ್ಜುನನಿಗೆ ಕೃಷ್ಣ ಗೆಳೆಯನಾದ? ಯಾವ ಶ್ಲೋಕ ಹೇಳಿದ್ದ ಅಂತ ಗುಹನನ್ನ ರಾಮ ಗುಂಡಿಗೆಗೆ ಅಪ್ಪಿಕೊಂಡಿದ್ದ? ಭಕ್ತಿ ಇರಬೇಕು ಅಷ್ಟೆ, ಭಕ್ತಿ. ಅದೊಂದೇ ದೇವರನ್ನು ಒಲಿಸಿಕೊಳ್ಳೊ ಮಂತ್ರ-ತಂತ್ರ-ಯಜ್ಞ-ಎಲ್ಲಾ…

ಬೆಳ್ಳಿ, ದೇವರ ಪೂಜೆ ಆರಂಭಿಸಿದ್ದಳು. ರಾಮಯ್ಯನೋರು ಬೆಳ್ಳಿಯ ಬಗ್ಗೆಯೇ ಆಲೋಚಿಸುತ್ತಿದ್ದರು. ಮಲ್ಲಿಗೆ ಹೂವಿನಂತಹ ಅವಳ ದೇಹ, ಗೋಧೂಳಿ ಮುಗಿಲಿನಂತಹ ತುಟಿ, ಕಡುಗಪ್ಪು ಕೂದಲು, ದೇವಸ್ಥಾನ ಕಂಬದಲ್ಲಿದ್ದ ಆ ಸ್ರ್ತೀಶಿಲ್ಪವನ್ನೇ ಹೋಲುವ ಶರೀರ… ಯಾಕಾಗಿ ರಾಮಯ್ಯನೋರಿಗೆ ಹೀಗೆ ನೆನಪಾಗುತ್ತಿತ್ತೋ ಏನೋ, ಆ ಬೆಲೆವೆಣ್ಣಿನ ರೂಪ..?

ಊಹುಂ. ಬೆಳ್ಳಿಯ ನೆನಪಿಲ್ಲದೆ ರಾಮರ ಸೇವೆ ಮಾಡಲು ಸಾಧ್ಯವೇ ಆಗುತ್ತಿಲ್ಲ. ದೇವಿರಿಗೆ ಬೆಳ್ಳಿಕವಚ ಹಾಕುವಾಗಲೂ ಅವಳದೇ ನೆನಪು. ಮೊಮ್ಮಗನ ಬೆಳ್ಳಿ ಉಡಿದಾರ ನೋಡಿದಾಗಲೂ ಅದೇ ನೆನಪು. ಪಕ್ಕದೂರಿನವರು ಭೂಮಿಪೂಜೆಗೆ ಕರೆದು ಬೆಳ್ಳಿ  ಗೋದಾನ ಕೊಟ್ಟಾಗಲೂ ಅವಳದೇ ನೆನಪು! ರಾಮರ ಸೇವೇಯೇ ಮುಖ್ಯ ಅಂದುಕೊಂಡಿದ್ದವರಿಗೆ ಯಾಕೆ ಹೀಗಾಯಿತು?

ಮಧ್ಯರಾತ್ರಿ. ಹೆಂಡತಿ ಪಕ್ಕದಲ್ಲಿ ರಾಮಯ್ಯನೋರು ಮಲಗಿದ್ದಾರೆ. ಆದರೆ ನೆನಪಲ್ಲಿ ತುಂಬಿಕೊಂಡಿರೋದು ಆ ಕೊನೆಮನೆಯಲ್ಲಿ ಈಗ ಯಾರ ಜೊತೆಗೋ ಮಲಗಿರಬಹುದಾದ ಬೆಳ್ಳಿ… ನಿದ್ದೆ ಹಾಳಾಗಿ ಹೋಯ್ತು. ನೆಮ್ಮದಿಯೇ ಇಲ್ಲ. ಅದು ಬೇಕು… ಅದೇ ಬೇಕು. ರಾಮ ನೀನೆ ಅದನ್ನ ಕೊಡಬೇಕು. ರಾಮಯ್ಯನೋರಿಗೆ ರಾಮನೊಬ್ಬನೇ ದಿಕ್ಕು.

ಬೆಳ್ಳಿಯ ಸಹವಾಸ ಮಾಡಲು ಏನೆಲ್ಲಾ ದಾರಿಗಳಿವೆಯೋ ಅವೆಲ್ಲವನ್ನೂ ಹುಡುಕಾಡುತ್ತಿದ್ದರು. ಆಗಲೇ ತಾವು ಚಿಕ್ಕವರಿದ್ದಾಗ ಕೇಳಿದ್ದ ಆ ಕಥೆ ನೆನಪಾಯಿತು…

ಒಂದೂರಲ್ಲಿ ಒಂದು ದೇವಸ್ಥಾನವಿತ್ತಂತೆ. ಅಲ್ಲೊಬ್ಬರು ಪೂಜಾರ್ರಿದ್ದರಂತೆ. ಆ ದೇವಸ್ಥಾನದೆದುರು ಒಂದು ಮನೆ ಇತ್ತಂತೆ. ಅಲ್ಲೊಬ್ಬಳು ವೇಶ್ಯೆ ಇದ್ದಳಂತೆ. ಇಬ್ಬರೂ ಒಂದೇ ಕಾಲಕ್ಕೆ ಸತ್ತರು. ಆಗ ಪೂಜಾರಿಗಳನ್ನು ಕರೆದೊಯ್ಯೋಕೆ ಕಿಂಕರರು, ವೇಶ್ಯೆಯನ್ನು ಕರೆದೊಯ್ಯೋಕೆ ವಿಷ್ಣುಸೇವಕರು ಬಂದರಂತೆ. ಪೂಜಾರಿಗೆ ಅಚ್ಚರಿ-ಗಾಬರಿ! “ನಾನು ದೈವಭಕ್ತ. ಸದಾ ದೇವರ ಸೇವೆ ಮಾಡುತ್ತಿದ್ದವನು. ನನ್ನನ್ನ ನರಕಕ್ಕೆ ಕರೆದೊಯ್ದ, ಆ ಸೂಳೆಯನ್ನ ಸ್ವರ್ಗಕ್ಕೆ ಕರೆದೊಯ್ತಾ ಇದ್ದೀರಲ್ಲ? ಇದ್ಯಾವ ನ್ಯಾಯ?” ಅಂತ ಗೋಳಾಡಿದರಂತೆ. ಆಗ ಕಿಂಕರರು “ನೀನು ದೇವರ ಸೇವೆ ಮಾಡುತ್ತಿದ್ದೆ, ಆದರೆ ಮನಸೆಲ್ಲಾ ಆ ವೇಶ್ಯೆ ಏನು ಮಾಡುತ್ತಿದ್ದಾಳೆ ಅಂತ ಯೋಚಿಸುತ್ತಾ ವ್ಯಭಿಚಾರ ಮಾಡುತ್ತಿತ್ತು. ಅವಳು, ತನ್ನ ಕೆಲಸ ಮಾಡುವಾಗ, ದೇವರು ನನ್ನನ್ನು ಕ್ಷಮಿಸಲಿ ಅಂತ ದೇವರ ಸ್ಮರಣೆ ಮಾಡುತ್ತಿದ್ದಳು. ದೇಹಕ್ಕಿಂತ ಮನಸ್ಸು ಮುಖ್ಯ. ಹಾಗಾಗಿ ಅವಳು ಸ್ವರ್ಗಕ್ಕೆ, ನೀನು ನರಕಕ್ಕೆ”.

ಈ ಕಥೆಯೇ ರಾಮಯ್ಯನವರಿಗೆ ಆಧಾರವಾಯ್ತು. “ದೇಹಕ್ಕಿಂತ ಮನಸ್ಸು ಮುಖ್ಯ” ಈ ದೇಹ ಯಾವುದಕ್ಕಾಗಿ ಹಪಹಪಿಸುತ್ತಿದೆಯೋ ಅದನ್ನ ಕೊಟ್ಟುಬಿಡೋಣ. ಒಂದು ಬಾರಿ ಚಟ ತೀರಿದರೆ, ಮತ್ತೆ ಮತ್ತೆ ಅದು ಬೇಕು ಅನ್ನಿಸೋದಿಲ್ಲ. ಈಗ ತನ್ನ ಹೆಂಡತಿಯನ್ನು ಕಂಡರೆ ಹೇಗೆ ನಿರ್ಭಾವವಾಗುತ್ತೋ ಅದೇ ಥರ ಬೆಳ್ಳಿಯ ಮೇಲೂ ಅಸಡ್ಡೆ ಬಂದೇ ಬರುತ್ತೆ. ಒಳಗೇ ಹಿಂಸೆ ಅನುಭವಿಸೋದಕ್ಕಿಂತ, ಸುಖಿಸಿ ಅನುಭವಿಸೋದೇ ವಾಸಿ, ಅನ್ನೋ ನಿರ್ಧಾರಕ್ಕೆ ಬಂದಿದ್ದರು ರಾಮಯ್ಯನೋರು.

ಆದರೂ ಅವರು ಈ ನಿರ್ಧಾರಕ್ಕೆ ಅಂಟಿಕೊಳ್ಳಲು ಒಂದು ವಾರ ಬೇಕಾಯ್ತು. “ರಾಮ, ನೀನೇ ನನ್ ಮನ್ಸುನ್ನ ತಡಿಬೇಕು ತಂದೆ” ಅಂತ ಬೇಡಿಕೊಂಡರು. ತ್ರೇತಾಯುಗದಿಂದಲೂ ಅಷ್ಟೆ, ರಾಮ ಯಾರನ್ನೂ ನಿರ್ಬಂಧಿಸುವವನಲ್ಲ. ರಾಮಯ್ಯನೋರನ್ನೂ ನಿರ್ಬಂಧಿಸಲಿಲ್ಲ. ರಾಮನೇ ನನ್ನನ್ನು ತಡೆಯದಿದ್ದಮೇಲೆ, ಅವನ ಅಪ್ಪಣೆ ಸಿಕ್ಕ ಹಾಗೆಯೇ ಅಂತ ತೀರ್ಮಾನಿಸಿದ ರಾಮಯ್ಯನವರು, ಆ ರಾತ್ರಿಗಾಗಿ ಕಾದರು.

ರಾಮಯ್ಯನವರು ತೀರ್ಮಾನಿಸಿದ್ದರು. ತನ್ನ ದೇಹ ಅದೇನೇ ಮಾಡಲಿ, ಮನಸ್ಸಿನ ತುಂಬಾ ರಾಮನೇ ತುಂಬಿರಬೇಕು. ದೇಹಕ್ಕಂಟುವ ಕೊಳಕು, ಮನಸ್ಸನ ಸಣ್ಣ  ಮೂಲೆಯನ್ನೂ ತಲುಪಬಾರದು. ಇದೇ ಶಪಥ ಮಾಡಿ, ಬೆಳ್ಳಿ ಮನೆಯ ಬಾಗಿಲು ತಟ್ಟಿದರು.

ಅಂದು ಬೆಳ್ಳಿ, ತನ್ನ ಕಣ್ಣೆದುರಿನ ದೇವರನ್ನ ತೃಪ್ತಿಗೊಳಿಸುವ ಹಂಬಲ ಪಟ್ಟಿದ್ದಳು. ಹಿಂದೆಂದೂ ಯಾರೂ ಈ ಪರಿ ಚೆಲುವಿನ ಬೆಳ್ಳಿಯನ್ನು ನೋಡಿರಲಿಲ್ಲ. ಅಂಗಾಂಗವನ್ನೂ ದೇವರ ಅರ್ಚನೆಗೆ ಸಿದ್ಧಗೊಳಿಸೋ ಬೆಳ್ಳಿಬಟ್ಟಲಂತೆ ತೊಳೆದಿಟ್ಟಿದ್ದಳು. ಅವಳ ಮಂಚದ ಮೇಲೆಲ್ಲಾ ಜಾಜಿಮಲ್ಲಿಗೆ, ಸಂಪಿಗೆಯ ಎಸಳು ಚೆಲ್ಲಿಯಾಗಿತ್ತು. ತನ್ನ ದೇವರನ್ನ ಕೈಹಿಡಿದು ಮಂಚದ ಮೇಲೆ ಕೂರಿಸಿಕೊಂಡಳು ಬೆಳ್ಳಿ.

“ಸೋಮಿಗ್ಳೇ, ನೀವು ನನ್ ದ್ಯಾವ್ರು. ಈ ಎಂಜಲೆಲೆ ಮ್ಯಾಲೆ ನಿಮ್ ದೃಷ್ಟಿ ಬಿದ್ದು ನನ್ ಜೀವ್ನ ಪೌವ್ನ ಆಯ್ತು... ಆದ್ರೆ...”
“ಏನ್ ಆದ್ರೆ ಬೆಳ್ಳಿ?” ಗಲ್ಲ ಹಿಡಿದು ಕೇಳಿದರು.
“ದೇವ್ರಾರದ್ನೆ ಮಾಡೋರ್ ನೀವು, ಇಂಗ್ ಮಾಡ್ಬೋದಾ..?”
ಒಂದರೆ ಕ್ಷಣ ಮೌನದ ಬಳಿಕ, “ಇದು ದೇವಾರಾಧನೆನೇ… ಕಾಮದೇವಾರಾಧನೆ.. ಬಾ”

ಮೈ ಚೆಲ್ಲಿದವು. ಘಟಸರ್ಪದಂತೆ ತಿಂಗಳಿಂದಲೂ ಬುಸುಗುಡುತ್ತಿದ್ದ ರಾಮಯ್ಯನೋರು ಈಗ ಯಾವ ಸದ್ದೂ ಇಲ್ಲದೆ ಬೆಳ್ಳಿಬಟ್ಟಲೊಳಗೆ ಬಿದ್ದು ವದ್ದಾಡಿದರು. ಬೆಳ್ಳಿಯ ಪಾಲಿಗಿದು ದೈವಾರಾಧನೆ. ರಾಮಯ್ಯನೋರಿಗೆ ಕಾಮಕೇಳಿ. ಹಾಗಾಗಿಯೇ ಅಲ್ಲಿ ಶ್ರೀರಾಮುರು ಬರಲೇ ಇಲ್ಲ. ಅಲ್ಲಿ ದೇವರಿರಲಿಲ್ಲ.

ಎಲ್ಲಾ ಮುಗೀತು. ರಾಮಯ್ಯನೋರು ಪಂಚೆ ಕಟ್ಟಿಕೊಳ್ಳುತ್ತಿದ್ದರು. ಸೆರಗು ಅವುಚಿ ಕೂತಿದ್ದ ಬೆಳ್ಳಿ ಕೇಳಿದಳು,
“ಸೋಮಿಗ್ಳೇ, ನಂದೊಂದು ಪ್ರಶ್ನೆ..”
“ಹ್ಮ್...ಕೇಳು”
“ನಾನ್ ಬೇರೆವ್ರ್ ಸವ್ವಾಸ ಮಾಡ್ತೀನಿ ಅಂತ ಎಲ್ರೂ ನನ್ನ ಸೂಳೇ ಸೂಳೇ ಅಂತಾರಲ್ಲ, ಈಗ ನನ್ ಸವ್ವಾಸ ಮಾಡಿದ್ ನೀವು ಸೂಳಾ ಆಗ್ಲಿಲ್ವಾ..?”

ಕಣ್ಣಿಗೆ ಕಾಣದ ಮಿಂಚೊಂದು ರಾಮಯ್ಯನೋರ ತಲೆಗೆ ಅಪ್ಪಳಿಸಿತ್ತು. ಅರ್ಧಬಿಗಿದ ಪಂಚೆಯಲ್ಲೇ ಅಲ್ಲಿಂದ ಬಿರುಸು ಹೆಜ್ಜೆಗಳನ್ನಿಟ್ಟರು ರಾಮಯ್ಯನೋರು. ಅವರು ಸೀದಾ ಹೋಗಿದ್ದು, ತನ್ನ ದೇವರಿದ್ದ ರಾಮಮಂದಿರಕ್ಕೆ. ಇನ್ನೇನು ದೇವಸ್ಥಾನದ ಮೆಟ್ಟಿಲು ಹತ್ತಬೇಕು, ಯಾರೋ ಕೂಗಿದರು “ನಿನ್ನಂಥವನಿಗಲ್ಲ ಶ್ರೀರಾಮರ ಸೇವೆಯ ಸೌಭಾಗ್ಯ. ನಿನಗಿಲ್ಲ ರಾಮರ ಸ್ಮರಣೆ ಮಾಡೋ ಅಧಿಕಾರ. ರಾಮರ ಹೆಸರು ಹೇಳೋ ಯೋಗ್ಯತೆ ನಿನ್ನಂಥವನಿಗಿಲ್ಲ. ಅಯೋಗ್ಯ. ಅಯೋಗ್ಯ. ಅಯೋಗ್ಯ ನೀನು”

ರಾಮಯ್ಯನವರು ಅಲ್ಲೇ ಕುಸಿದು ಬಿದ್ದರು. ಅದೇ ಅವರ ಕೊನೆಯ ಕುಸಿತ…

-ನಾದೀ

Saturday, 22 April 2017

ಕನ್ನಡಕದ ಕಥೆ- ಸುಲೋಚನ ಚರಿತೆ


        ನೀವು ನನ್ನ ಹಾಗೆ ಕನ್ನಡಕ ಹಾಕಿಕೊಳ್ಳುವವರಾದರೆ, ಈ ಅನುಭವ ನಿಮಗೂ ಆಗಿರುತ್ತೆ… ಇದು ನನ್ನ ಮತ್ತು ನಿಮ್ಮ “ಸುಲೋಚನ ಚರಿತೆ...”

ಅವತ್ತು ಬೆಳಗ್ಗೆ LapTopನಲ್ಲಿ ಏನೋ ಕೆಲಸ ಮಾಡ್ತಿದ್ದೆ. ಆ ಕೆಲಸ ಮುಗಿಸಿ ಸ್ನಾನ ಮಾಡಲು ಹೋದೆ. ಆಗಲೇ ನನಗೆ ಗೊತ್ತಾಗಿದ್ದು, ಇನ್ನೂ ಕನ್ನಡಕ ತೆಗೆದಿಟ್ಟಿಲ್ಲ ಅಂತ. ಆಗ ನನಗಾದ ಇರುಸು ಮುರಿಸು ಅಷ್ಟಿಷ್ಟಲ್ಲ. ಬಟ್ಟೆ ಅಂಗಡಿಗೆ ಹೋದಾಗಲೂ ಅಷ್ಟೆ, Shirt Try ಮಾಡಲು ವಿಫಲವಾದಗಲೇ, ನಾನಿನ್ನೂ ಕನ್ನಡಕನ ತೆಗೆದಿಲ್ಲ ಅಂತ ಗೊತ್ತಾಗೋದು.


ಕೆಲವೊಮ್ಮೆ ನಾಚಿಕೆಯಾಗುತ್ತೆ, ಯಾಕೆ ಗೊತ್ತಾ..? ಇಲ್ಲದ ಕನ್ನಡಕನ ಸರಿ ಮಾಡಿಕೊಳ್ಳಬೇಕು ಅಂತ ತೋರುಬೆರಳು ಮೂಗಿನ ತುದಿ ಮುಟ್ಟುತ್ತೆ. ಅಲ್ಲಿ ಕನ್ನಡಕವೇ ಇರೋದಿಲ್ಲ..! ಇನ್ನೇನು ಮಾಡೋದು, ಕಣ್ಣೊರೆಸಿಕೊಂಡು, ಯಾರೂ ನೋಡಿಲ್ಲ ಅಂತ ಸಾಮಾಧಾನ ಪಡ್ಕೋತೀನಿ.


ಅಲ್ಲ, ನೀವೇ ಹೇಳಿ, ಕನ್ನಡಕ ಹಾಕ್ಕೋಳ್ಳೋದು ಯಾಕೆ? ಕಣ್ಣು ಚೆನ್ನಾಗಿ ಕಾಣಲಿ ಅಂತ ತಾನೆ? ಆದರೆ ಕೆಲವು ಅಮೂಲ್ಯ ಸಮಯಗಳಲ್ಲಿ ಆ ಅವಕಾಶವೇ ಇಲ್ಲವಾಗುತ್ತೆ. ಬಿಸಿ Tea ಕುಡೀತಿದ್ರೆ, ಮಟ ಮಟ ಮಧ್ಯಾಹ್ನದಲ್ಲೂ ಕಣ್ಮುಂದೆ ಮಂಜು ಕವಿದಹಾಗಾಗುತ್ತಲ್ಲಾ… ಕನ್ನಡಕ ಬಳಸೋ ನಮಗೆ ಟೀ ಹೀರುತ್ತಾ, ಮಳೆ ನೋಡೋ ಸೌಭಾಗ್ಯವೇ ಬೇಡ್ವೇ!?


ಮತ್ತೊಂದು ಬೇಸರ ಏನು ಗೊತ್ತಾ..? ನನ್ನಕ್ಕನ ಮಗು ಕಾರುಣ್ಯನಿಗೆ ಇಷ್ಟ ಬಂದಾಕ್ಷಣ ಮುತ್ತು ಕೊಡೋ ಹಾಗಿಲ್ಲ… ಈ ಕನ್ನಡಕ ಅಡ್ಡ ಬರುತ್ತೆ. ಇದನ್ನ ತೆಗೆದಿಟ್ಟು ಮುತ್ತು ಕೊಡೋ ಅಷ್ಟರಲ್ಲಿ, ಮುತ್ತಿನಂತಹ ಕ್ಷಣವೇ ಜಾರಿಹೋಗಿಬಿಟ್ಟಿರುತ್ತೆ. ನನ್ನದೇ ಈ ಗೋಳಾದರೆ, ಇನ್ನು ಮದುವೆಯಾದವರ ಗತಿ...ದೇವರಿಗೇ ಪ್ರೀತಿ!!


ಒಮ್ಮೊಮ್ಮೆ ನನಗೆ ಅನುಮಾನವಾಗುತ್ತೆ. ಯಾರೊಟ್ಟಿಗಾದರೂ ಮಾತಾಡುತ್ತಿದ್ದರೆ, ಅವರಿಗೆ ನನ್ನ ಕಣ್ಣಿನ ಭಾವನೆಗಳು ಗೊತ್ತಾಗುತ್ತಿದೆಯಾ ಅಂತ! ಹಾಗಾಗಿನೇ ಎಷ್ಟೋ ಸಲ, ತೊಂದರೆ ಆದ್ರೂ ಪರವಾಗಿಲ್ಲ ಅಂತ ನಿಮ್ಮ ಜೊತೆ ಕನ್ನಡಕ ತೆಗೆದೇ ಮಾತಾಡುತ್ತಿರ್ತೀನಿ.


ನನ್ನ ಕನ್ನಡಕದ ಮೇಲೆ ನನಗೆ ವಿಪರೀತ ಕೋಪ ಬರೋದು ಯಾವಾಗ ಗೊತ್ತಾ..? ನನ್ನ ಮೂಗನ್ನೇನು ಮೂಗು ಅಂದ್ಕೊಂಡಿದೆಯೋ ಅಥವಾ ಜಾರುಬಂಡಿ ಅಂದ್ಕೊಂಡಿದೆಯೋ ಈ ಕನ್ನಡಕ? ಪದೇ ಪದೇ ಜಾರಿ ಹೋಗುತ್ತಿರುತ್ತೆ! ಮತ್ತೆ ಮತ್ತೆ ಸರಿ ಮಾಡಿಕೊಳ್ಳಬೇಕು ಅಂದ್ರೆ, ಸಿಟ್ಟು-ಬೇಜಾರು! ಅದೇ ಯಾರಾದರೂ ಕನ್ನಡಕದ ಗಾಜನ್ನ ಮುಟ್ಟಲಿ, ಅವರನ್ನ ಭೀಮ ಹಿಡಿಂಬನನ್ನ ಗುದ್ದಿ ಗುದ್ದಿ ಕೊಂದ ಹಾಗೆ ಸಾಯಿಸಬೇಕು ಅನ್ನಿಸುತ್ತೆ…


ನನ್ನ ಮನೇಲಿ ಮತ್ತು ಆಫೀಸಲ್ಲಿ ಕನ್ನಡಕಕ್ಕೆ ಅಂತಲೇ ಒಂದು ಜಾಗ ಮಾಡಿಟ್ಟಿದ್ದೀನಿ. ಅಕಸ್ಮಾತ್ ಅದೇನಾದರೂ ಅಲ್ಲಿಲ್ಲ ಅಂದರೆ, ಭೈರಪ್ಪನವರ “ಸಾಕ್ಷಿ” ಕಾದಂಬರಿಯಲ್ಲಿ ಪರಮೇಶ್ವರಯ್ಯನ ಸೂಕ್ಷ್ಮ ಕಾಯ, ಸದ್ದು ಬಂದ ದಿಕ್ಕನ್ನು ಹುಡುಕುವ ಪ್ರಯತ್ನ ಮಾಡುತ್ತಲ್ಲಾ, ಹಾಗಾಗಿ ಬಿಡ್ತೀನಿ. ಮತ್ತೆ ಸಗರನ ಮಕ್ಕಳ ಹಾಗೆ ಅತಳ, ವಿತಳ, ಸುತಳ, ತಳಾತಳ, ಮಹಾತಳ, ರಸಾತಳ, ಪಾತಾಳ ಲೋಕಗಳನ್ನೆಲ್ಲಾ ಹುಡುಕಬೇಕು..!


ಅದೆಲ್ಲಕ್ಕಿಂತಲೂ ದುರಂತವೇನು ಗೊತ್ತಾ..? 3D ಸಿನಿಮಾ ನೋಡೋಕೆ ಹೋದಾಗ, ನನ್ನ ಕನ್ನಡಕದ ಮೇಲೆ 3D ಕನ್ನಡಕ ಹಾಕ್ಕೊಂಡು 2 ಗಂಟೆ ಕೂರಬೇಕಲ್ಲಾ… ಎಂಥಾ ದುರ್ವಿಧಿ.. ಎಂಥಾ ದುರ್ವಿಧಿ…


ಇಷ್ಟೆಲ್ಲಾ ಕಷ್ಟ ಕೊಟ್ಟರೂ ನನಗೆ ನನ್ನ ಕನ್ನಡಕವೆಂದರೆ ಪ್ರೀತಿ… ಮಮತೆ… ಅಕ್ಕರೆ… ನನ್ನ ಅವಿಭಾಜ್ಯ ಅಂಗವಾಗಿ, ಜೀವನದ ಆಸರೆಯಾಗಿ ನಿಂತ ಸುಲೋಚನ… ನಾ ನಿನಗೆ ಋಣಿ…


-ನಾದೀ

ಊರ್ಮಿಳೆಯ ತಪಸ್ಸು!

ಊರ್ಮಿಳೆಯ ತಪಸ್ಸು..! ‘ಅಷ್ಟೇನಾ..? ಅಷ್ಟಾಕ್ಕೆ ಅಪ್ಪಾಜಿ ಹೀಗೆ ಚಿಂತಾಕ್ರಾಂತರಾದ್ರಾ? ಈಗೋ, ಇವತ್ತೇ, ಈಗಲೇ ಹೊರಟೆ. ನೀವೇನು ಯೋಚಿಸಬೇಡಿ. ಅಪ್ಪ ಕೊಟ್ಟ ಮಾತನ್ನ ...