Saturday, 22 April 2017

ಕನ್ನಡಕದ ಕಥೆ- ಸುಲೋಚನ ಚರಿತೆ


        ನೀವು ನನ್ನ ಹಾಗೆ ಕನ್ನಡಕ ಹಾಕಿಕೊಳ್ಳುವವರಾದರೆ, ಈ ಅನುಭವ ನಿಮಗೂ ಆಗಿರುತ್ತೆ… ಇದು ನನ್ನ ಮತ್ತು ನಿಮ್ಮ “ಸುಲೋಚನ ಚರಿತೆ...”

ಅವತ್ತು ಬೆಳಗ್ಗೆ LapTopನಲ್ಲಿ ಏನೋ ಕೆಲಸ ಮಾಡ್ತಿದ್ದೆ. ಆ ಕೆಲಸ ಮುಗಿಸಿ ಸ್ನಾನ ಮಾಡಲು ಹೋದೆ. ಆಗಲೇ ನನಗೆ ಗೊತ್ತಾಗಿದ್ದು, ಇನ್ನೂ ಕನ್ನಡಕ ತೆಗೆದಿಟ್ಟಿಲ್ಲ ಅಂತ. ಆಗ ನನಗಾದ ಇರುಸು ಮುರಿಸು ಅಷ್ಟಿಷ್ಟಲ್ಲ. ಬಟ್ಟೆ ಅಂಗಡಿಗೆ ಹೋದಾಗಲೂ ಅಷ್ಟೆ, Shirt Try ಮಾಡಲು ವಿಫಲವಾದಗಲೇ, ನಾನಿನ್ನೂ ಕನ್ನಡಕನ ತೆಗೆದಿಲ್ಲ ಅಂತ ಗೊತ್ತಾಗೋದು.


ಕೆಲವೊಮ್ಮೆ ನಾಚಿಕೆಯಾಗುತ್ತೆ, ಯಾಕೆ ಗೊತ್ತಾ..? ಇಲ್ಲದ ಕನ್ನಡಕನ ಸರಿ ಮಾಡಿಕೊಳ್ಳಬೇಕು ಅಂತ ತೋರುಬೆರಳು ಮೂಗಿನ ತುದಿ ಮುಟ್ಟುತ್ತೆ. ಅಲ್ಲಿ ಕನ್ನಡಕವೇ ಇರೋದಿಲ್ಲ..! ಇನ್ನೇನು ಮಾಡೋದು, ಕಣ್ಣೊರೆಸಿಕೊಂಡು, ಯಾರೂ ನೋಡಿಲ್ಲ ಅಂತ ಸಾಮಾಧಾನ ಪಡ್ಕೋತೀನಿ.


ಅಲ್ಲ, ನೀವೇ ಹೇಳಿ, ಕನ್ನಡಕ ಹಾಕ್ಕೋಳ್ಳೋದು ಯಾಕೆ? ಕಣ್ಣು ಚೆನ್ನಾಗಿ ಕಾಣಲಿ ಅಂತ ತಾನೆ? ಆದರೆ ಕೆಲವು ಅಮೂಲ್ಯ ಸಮಯಗಳಲ್ಲಿ ಆ ಅವಕಾಶವೇ ಇಲ್ಲವಾಗುತ್ತೆ. ಬಿಸಿ Tea ಕುಡೀತಿದ್ರೆ, ಮಟ ಮಟ ಮಧ್ಯಾಹ್ನದಲ್ಲೂ ಕಣ್ಮುಂದೆ ಮಂಜು ಕವಿದಹಾಗಾಗುತ್ತಲ್ಲಾ… ಕನ್ನಡಕ ಬಳಸೋ ನಮಗೆ ಟೀ ಹೀರುತ್ತಾ, ಮಳೆ ನೋಡೋ ಸೌಭಾಗ್ಯವೇ ಬೇಡ್ವೇ!?


ಮತ್ತೊಂದು ಬೇಸರ ಏನು ಗೊತ್ತಾ..? ನನ್ನಕ್ಕನ ಮಗು ಕಾರುಣ್ಯನಿಗೆ ಇಷ್ಟ ಬಂದಾಕ್ಷಣ ಮುತ್ತು ಕೊಡೋ ಹಾಗಿಲ್ಲ… ಈ ಕನ್ನಡಕ ಅಡ್ಡ ಬರುತ್ತೆ. ಇದನ್ನ ತೆಗೆದಿಟ್ಟು ಮುತ್ತು ಕೊಡೋ ಅಷ್ಟರಲ್ಲಿ, ಮುತ್ತಿನಂತಹ ಕ್ಷಣವೇ ಜಾರಿಹೋಗಿಬಿಟ್ಟಿರುತ್ತೆ. ನನ್ನದೇ ಈ ಗೋಳಾದರೆ, ಇನ್ನು ಮದುವೆಯಾದವರ ಗತಿ...ದೇವರಿಗೇ ಪ್ರೀತಿ!!


ಒಮ್ಮೊಮ್ಮೆ ನನಗೆ ಅನುಮಾನವಾಗುತ್ತೆ. ಯಾರೊಟ್ಟಿಗಾದರೂ ಮಾತಾಡುತ್ತಿದ್ದರೆ, ಅವರಿಗೆ ನನ್ನ ಕಣ್ಣಿನ ಭಾವನೆಗಳು ಗೊತ್ತಾಗುತ್ತಿದೆಯಾ ಅಂತ! ಹಾಗಾಗಿನೇ ಎಷ್ಟೋ ಸಲ, ತೊಂದರೆ ಆದ್ರೂ ಪರವಾಗಿಲ್ಲ ಅಂತ ನಿಮ್ಮ ಜೊತೆ ಕನ್ನಡಕ ತೆಗೆದೇ ಮಾತಾಡುತ್ತಿರ್ತೀನಿ.


ನನ್ನ ಕನ್ನಡಕದ ಮೇಲೆ ನನಗೆ ವಿಪರೀತ ಕೋಪ ಬರೋದು ಯಾವಾಗ ಗೊತ್ತಾ..? ನನ್ನ ಮೂಗನ್ನೇನು ಮೂಗು ಅಂದ್ಕೊಂಡಿದೆಯೋ ಅಥವಾ ಜಾರುಬಂಡಿ ಅಂದ್ಕೊಂಡಿದೆಯೋ ಈ ಕನ್ನಡಕ? ಪದೇ ಪದೇ ಜಾರಿ ಹೋಗುತ್ತಿರುತ್ತೆ! ಮತ್ತೆ ಮತ್ತೆ ಸರಿ ಮಾಡಿಕೊಳ್ಳಬೇಕು ಅಂದ್ರೆ, ಸಿಟ್ಟು-ಬೇಜಾರು! ಅದೇ ಯಾರಾದರೂ ಕನ್ನಡಕದ ಗಾಜನ್ನ ಮುಟ್ಟಲಿ, ಅವರನ್ನ ಭೀಮ ಹಿಡಿಂಬನನ್ನ ಗುದ್ದಿ ಗುದ್ದಿ ಕೊಂದ ಹಾಗೆ ಸಾಯಿಸಬೇಕು ಅನ್ನಿಸುತ್ತೆ…


ನನ್ನ ಮನೇಲಿ ಮತ್ತು ಆಫೀಸಲ್ಲಿ ಕನ್ನಡಕಕ್ಕೆ ಅಂತಲೇ ಒಂದು ಜಾಗ ಮಾಡಿಟ್ಟಿದ್ದೀನಿ. ಅಕಸ್ಮಾತ್ ಅದೇನಾದರೂ ಅಲ್ಲಿಲ್ಲ ಅಂದರೆ, ಭೈರಪ್ಪನವರ “ಸಾಕ್ಷಿ” ಕಾದಂಬರಿಯಲ್ಲಿ ಪರಮೇಶ್ವರಯ್ಯನ ಸೂಕ್ಷ್ಮ ಕಾಯ, ಸದ್ದು ಬಂದ ದಿಕ್ಕನ್ನು ಹುಡುಕುವ ಪ್ರಯತ್ನ ಮಾಡುತ್ತಲ್ಲಾ, ಹಾಗಾಗಿ ಬಿಡ್ತೀನಿ. ಮತ್ತೆ ಸಗರನ ಮಕ್ಕಳ ಹಾಗೆ ಅತಳ, ವಿತಳ, ಸುತಳ, ತಳಾತಳ, ಮಹಾತಳ, ರಸಾತಳ, ಪಾತಾಳ ಲೋಕಗಳನ್ನೆಲ್ಲಾ ಹುಡುಕಬೇಕು..!


ಅದೆಲ್ಲಕ್ಕಿಂತಲೂ ದುರಂತವೇನು ಗೊತ್ತಾ..? 3D ಸಿನಿಮಾ ನೋಡೋಕೆ ಹೋದಾಗ, ನನ್ನ ಕನ್ನಡಕದ ಮೇಲೆ 3D ಕನ್ನಡಕ ಹಾಕ್ಕೊಂಡು 2 ಗಂಟೆ ಕೂರಬೇಕಲ್ಲಾ… ಎಂಥಾ ದುರ್ವಿಧಿ.. ಎಂಥಾ ದುರ್ವಿಧಿ…


ಇಷ್ಟೆಲ್ಲಾ ಕಷ್ಟ ಕೊಟ್ಟರೂ ನನಗೆ ನನ್ನ ಕನ್ನಡಕವೆಂದರೆ ಪ್ರೀತಿ… ಮಮತೆ… ಅಕ್ಕರೆ… ನನ್ನ ಅವಿಭಾಜ್ಯ ಅಂಗವಾಗಿ, ಜೀವನದ ಆಸರೆಯಾಗಿ ನಿಂತ ಸುಲೋಚನ… ನಾ ನಿನಗೆ ಋಣಿ…


-ನಾದೀ

ಊರ್ಮಿಳೆಯ ತಪಸ್ಸು!

ಊರ್ಮಿಳೆಯ ತಪಸ್ಸು..! ‘ಅಷ್ಟೇನಾ..? ಅಷ್ಟಾಕ್ಕೆ ಅಪ್ಪಾಜಿ ಹೀಗೆ ಚಿಂತಾಕ್ರಾಂತರಾದ್ರಾ? ಈಗೋ, ಇವತ್ತೇ, ಈಗಲೇ ಹೊರಟೆ. ನೀವೇನು ಯೋಚಿಸಬೇಡಿ. ಅಪ್ಪ ಕೊಟ್ಟ ಮಾತನ್ನ ...