Friday, 15 May 2015

ಆದಿದಂಪತಿ

ಆದಿ ದಂಪತಿಗಳಾ ಬದುಕೆ
ಆದರ್ಶ ಅವನಿದಂಪತಿಗೆ,
ಜನುಮಜನುಮಾಂತರದವರ
ಅನುಬಂಧ ಆನಂದ ಮಾರ್ಗ ನಮಗೆ,
ಮಡದಿಯೊಡನೆ ಭವಸಾಗರ ಯಾನ,
ಭರತಭುವಿಯ ಋಷಿವನ ಜೀವನ,
ಸ್ಪೂರ್ತಿ ಸಿಂಧು ಕೊನೆವರೆಗೆ...

ಪರಶಿವನನೊಂದು ಕಡೆ,
ಪಾರ್ವತಿಯನೊಂದು ಕಡೆ,
ಬಿಡಿಬಿಡಿಯಾಗಿ ಹುಡುಕಾಡಿದೆ.
ವೇ‌ದ-ನಾದದ ಹಾಗೆ
ಮಾತು-ಅರ್ಥದ ಹಾಗೆ
ಕೈಗೆ ದೊರಕಿದರೊಂದೆ ದೇಹದೊಳಗೆ.

ಕೈಲಾಸದಂಚಿನಲಿ,
ಹಿಮರಾಜಿ ಮಂಚದಲಿ,
ಮೇಘವೇ ಮೆದುಗಾಳಿ ಬೀಸುವಾಗ,
ಹರನ ಪದತಲದಲ್ಲಿ,
ತನುಸೇವೆ ಮಾಡುತಲಿ,
ಗೌರಾಂಗಿ ಪ್ರಶ್ನೆಗಳ ಕೇಳುವಾಗ,
ಶಿವ ಕೊಟ್ಟ ಉತ್ತರವೆ ನವ ಪುರಾಣ,
ಇಂದಿಗೂ ವೇದಗಳಿಗವೆ ಪ್ರಮಾಣ.
ಅವರ ಸರಸವಿದೆ-ಲೋಕ ಕಲ್ಯಾಣ....

ಬೇಡಿದೊಡೆ ವರಕರುಣಿಸುವನು ಕಾಪಾಲಿ,
ಬೇಡಿದಾಟವನಾಡೆ ಮಣಿಸುವಳು ಕಾಳಿ.
ಅರೆನಗ್ನನಾಗಲೆವ ಮಸಣದಲಿ ಬೋಳಾ ಶಂಕರ,
ಅನ್ನಪೂರ್ಣೆ ಭುವನಕಿದಳು
ಶಿವನಿಗೋಸ್ಕರ.
ಹಿಡಿದರೆಟುಕನು ಕೈಗೆ,
ಸಿಲುಕನಾಗಿಹ ಮಾಯೆಗೆ,
ಬಲು ಬೇಗ ಸಿಡುಕುವನು,
ಮದನಾರಿ ಶಶಿ ಶೇಖರ.
ಮಮತೆ ಸುಧೆಯನು ಸುರಿಸಿ,
ಮಕ್ಕಳೊಟ್ಟಗೆ ಬೆರೆಸಿ,
ಪೂರ್ವಾಪರ ಕಾಯುವಳು
ಮೊದ ನಾರಿ ಉಮೆ....

ಮೊದಲ ದಂಪತಿಗಳವರೆ,
ಬೆಳಕೆಮ್ಮ ಪಾಲಿಗೆ.
ಸತಿ ಪತಿಯ ಸುಖಸಾರ
ಸಂಸಾರ-ಸಮಭಾರ
ಎಂಬ ಸೂತ್ರವ ತೋರಿಹರು
ನಮ್ಮ ಬಾಳಿಗೆ,
ಅನಂತ ನಮನವಿದೋ
ಆದಿ ದಂಪತಿಗಳಿಗೆ..

ನಾದೀ....

ಭರತ=ಭ್ರಾತೃಭಕ್ತಿ

ರಾಮಾಯಣದಲ್ಲಿ ದೈವತ್ವ ಪ್ರಾಪ್ತಿಯಾಗಿದ್ದು ಒಂದು ರಾಮನಿಗೆ, ಮತ್ತೊಂದು ಹನುಮನಿಗೆ. ರಾಮನ ಮಡದಿಯಾದ್ದರಿಂದ ಸೀತೆಗೂ ಹೇಗೊ ಗುಡಿಯೊಳಗೆ ಜಾಗ ಸಿಕ್ಕಿತು. ಪಾಪ, ಅಣ್ಣನೊಟ್ಟಿಗೆ ಕಾಡಿಗೆ ಹೋದ ಅಂತಲೂ ಮತ್ತು ಆದಿಶೇಷನ ಅಂಶ ಅಂತಲೂ ಲಕ್ಷ್ನಣ ಹಾಗೂ ಹೀಗೂ ದಂಪತಿಗಳ ಪಕ್ಕದಲ್ಲಿ ನಿಂತು ಬಿಟ್ಟ. ಸ್ವಾಮಿಸೇವೆ ಸ್ವಾಮಿ ನಿಷ್ಠೆ ಅಂತ ಹನುಮಂತ ಕೂತು ಬಿಟ್ಟ. ರಾಮ ಮಂದಿರ ಈ ನಾಲ್ಕೂ ಜನರಿಗೆ ನಿವಾಸವಾಗಿ ಹೋಯ್ತು.

ಇತ್ತ ಕೈಕೇಯಿ ಏನೆಲ್ಲ idea ಮಾಡಿ ರಾಮನನ್ನು ಹೊರ ತಳ್ಳಿ ತನ್ನ ಮಗನನ್ನ ಮಹಾರಾಜನನ್ನಾಗಿಸಲು ಹೆಣಗಿದಳೋ ಆ ಪ್ರಯತ್ನವನ್ನೆಲ್ಲಾ ಸಮುದ್ರಕ್ಕೆ ಸಕ್ಕರೆ ಬೆರೆಸುವ ವ್ಯರ್ಥ ಯತ್ನವೆಂಬಂತೆ ಮಾಡಿದ್ದು ಸ್ವತಃ ಅವಳ ಮಗ ಭರತನೆ. ಯಾರಿಗಾಗಿ ತನ್ನ ಗಂಡನಿಂದ, ಸವತಿಯರಿಂದ, ರಾಜ್ಯದ ಜನತೆಯಿಂದ, ಪ್ರಸ್ತುತ ಸಮಯದಲ್ಲೂ ಅದೆಷ್ಟೋ ಜನರಿಂದ ಛೀಮಾರಿ ಹಾಕಿಸಿಕೊಂಡು ಸಂಕಟ ಅನುಭವಿಸಿದಳೋ ಅವನೇ ಕೈಕೆಯ ಮನೆಹಾಳು ವಿಜಯವನ್ನು ತಿಪ್ಪೆಗೆಸೆದ. ಅಷ್ಟೇ ಅಲ್ಲ, ಕತ್ತಿ ಹಿಡಿದು ಅವಳ ಕತ್ತು ಕತ್ತರಿಸಲು ಮುಂದಾದ. ಮತ್ತೆಲ್ಲಿ ಇವಳನ್ನು ಕೊಂದರೆ ಮಾತೃ ಹತ್ಯಾ ಪಾಪಕ್ಕೆ ರಾಮ ನನ್ನನ್ನು ದೂರ ತಳ್ಳುತ್ತಾನೋ ಅಂತ ಯೋಚಿಸಿ ಕೊಲ್ಲಲಿಲ್ಲ. ಕೈಕೆ ದಶರಥ ಸತ್ತ ಮೇಲೆ ಒಂಟಿಯಾದಳು. ಮಗನೂ ದ್ವೇಷಿಸಲು ಶುರು ಮಾಡಿದ. ಈಗವಳಿಗೆ ಗತಿ ಉಳಿದ್ದದ್ದು ಕರುಣಾಪಯೋನಿಧಿ ಶ್ರೀ ರಾಮ...

ಭರತನಿಗೆ ಎಂಥ ದುಸ್ಥಿತಿಯೊದಗಿತ್ತು ಎಂದರೆ ಇಡೀ ದೇಶವೇ ನಂಬಿತ್ತು ರಾಮನ ಅರಣ್ಯವಾಸ ಇವನದೇ preplan ಅಂತ. ಯಾರೊಬ್ಬರೂ ಭರತನ ಪರವಾಗಿ ನಿಲ್ಲುವವರೇ ಇರಲಿಲ್ಲ, ವಸಿಷ್ಠರನ್ನು ಬಿಟ್ಟರೆ. ವಸಿಷ್ಠರು ಕೈಕೆಗೆ warning ಸಹ ಮಾಡಿದ್ದರು, ನಿನ್ನ ಈ ದುಷ್ಕೃತ್ಯವನ್ನು ನಿನ್ನ ಮಗ ಕೂಡ ಸಹಿಸೊಲ್ಲ ಅಂತ. ಭರತ ಆ ಅನಾದರದಿಂದ ಮನನೊಂದು ಖಿನ್ನನಾಗಿ ಹೋದ. ಅಲ್ಲದೆ ಹೆತ್ತ ತಾಯಿಯನ್ನ ಹತ್ತು ಜನ ವಿಧ ವಿಧವಾಗಿ ಆಡಿಕೊಳ್ಳುವ ಬೈದುಕೊಳ್ಳುವ ವಿಷಯ ಗೊತ್ತಿದ್ದೂ ಸಹ ಮಗನಿಗೆ ನೆಮ್ಮದಿಯಿರುತ್ತಾ? ಅದಕ್ಕೆ ಭರತ ತೀರ್ಮಾನಿಸಿದ ನೇರ ರಾಮನಿರುವಲ್ಲಿಗೆ ಹೋಗಿ, ಅತ್ತು ಕರೆದು ಗೋಗರೆದು ಹೇಗೋ ಮಾಡಿ ಅವನಿಗೆ ರಾಜ್ಯ ಹಿಂದುರಿಗಿಸಿ ಲೋಕ ನಿಂದನೆಯಿಂದ ಪಾರಾಗಬೇಕು ಅಂತ.
ಅಣ್ಣನ ಕಷ್ಟ ಇಲ್ಲವಾಗಬೇಕು ಅಂತ.

ಹೊರಟ, ತನ್ನ ಸಕಲ ರಾಜಪರಿವಾರದೊಂದಿಗೆ ಭರತ, ರಾಮನನ್ನ ಹುಡುಕುತ್ತ. ದಾರಿಯಲ್ಲಿ ಸಿಕ್ಕವರೆಲ್ಲ ಅನುಮಾನ ಪಡುವವರೆ. ಗುಹನಂತಹ ಬೇಟೆಗಾರರು ಅನುಮಾನಿಸಿದ್ದರೆ ಪರವಾಗಿಲ್ಲ, ಭಾರದ್ವಜರಂಥ ಮಹಾಂತರು 'ಏನೂ, ರಾಮ ಕಾಡಿನಲ್ಲೂ ಉಳಿಯದಂತೆ ಮಾಡಲು ಯುದ್ಧಕ್ಕೆ ಸಿದ್ಧನಾಗಿ ಬಂದೆಯ?' ಎಂದು ಕೇಳಿದಾಗ ಭರತನಿಗೆ ಅವನ ಜೀವವೇ ಭಾರವಾಗಿ ಹೋಗಿತ್ತು. ಅದು ಬಿಡಿ, ದೂರದಿಂದ ಭರತನ ಆಗಮನ ಗಮನಿಸಿದ ಲಕ್ಷ್ಮಣನೂ ಸಹ ಭರತ ಬರುತ್ತಿರುವುದು ಯುದ್ಧಕ್ಕಾಗಿಯೇ ಎಂದು ಭಾವಿಸಿಬಿಟ್ಟ. ಆದರೆ ರಾಮ ಸೌಮಿತ್ರಿಯ ಆ ಆಗ್ರಹವನ್ನು ನಿಗ್ರಹಿಸಿದ. ಸಧ್ಯ ಈ ವಿಷಯ ಭರತನಿಗೆ ಗೊತ್ತಾಗಿಲ್ಲ, ಗೊತ್ತಿದ್ದರೆ ಅವನಿಗೆಷ್ಟು ಹಿಂಸೆಯಾಗುತ್ತಿತ್ತೋ ಏನೋ...

ಭರತ ಕಣ್ಣೀರು ಸುರಿಸಿ ಅಂಗಲಾಚಿದರೂ ರಾಮ ಮಾತ್ರ ಅಯೋಧ್ಯೆಯ ಪ್ರವೇಶಕ್ಕೆ ನಿಶೇಧಿಸಿದ. ತಂದೆಗೆ ಮಾತು ಕೊಟ್ಟಾಗಿದೆ, ಈಗ ಅವರಿಲ್ಲ ಎಂಬ ನೆಪ ಹೂಡಿ ಕೊಟ್ಟ ಮಾತು ತಪ್ಪಿದರೆ ಅದಕ್ಕಿಂತಲು ಹೇಯ ಮತ್ತೊಂದಿಲ್ಲ ಎಂಬುದು ರಾಮನ ನಿಲುವಾಗಿತ್ತು. ಹಾಗಾಗಿ ದಾಶರಥಿ ಭರತನ ಆಹ್ವಾಹನವನ್ನ ತಿರಸ್ಕರಿಸಿಬಿಟ್ಟ. ಕೊನೆಗೆ ಭರತ ಕಾಡಿ ಬೇಡಿ ರಾಮನ ಪಾದರಕ್ಷೆಯನ್ನ ಇಸಿದುಕೊಂಡ. ಆ ಚಪ್ಪಲಿಗಳಿಗೆ ಪಟ್ಟಾಭಿಷೇಕ ಮಾಡಿ, ನಾನು ಉಸ್ತುವಾರಿ ಮಾತ್ರ ನೋಡಿಕೊಳ್ಳುತ್ತೇನೆ ಎಂದ. ಅಲ್ಲದೆ ಅಯೋಧ್ಯೆಯ ತನಕ ರಾಮನ ಚಪ್ಪಲಿಗಳನ್ನ ನೆತ್ತಿಯಲ್ಲೇ ಹೊತ್ತು ಸಾಗಿದೆ. ಅಷ್ಟು ಭ್ರಾತೃಭಕ್ತಿ ಭರತನಿಗೆ.

ಅಣ್ಣ ನಿರಾಕರಿಸಿದ ರಾಜ ವೈಭೋಗ ತನಗೂ ಬೇಡ ಎಂದು ಅದನ್ನೆಲ್ಲ  ತ್ಯಜಿಸಿಬಿಟ್ಟ ಭರತ. ತಾನೂ ಅಣ್ಣನಂತೆಯೇ ನಾರುಮುಡಿಯುಟ್ಟ. ನಗರವಾಸವನ್ನ ಬಿಟ್ಟ. ಅಯೋಧ್ಯಯಿಂದ ತುಸು ದೂರವಿದ್ದ ನಂದಿ ಗ್ರಾಮದಲ್ಲಿದ್ದ. ಅಲ್ಲದೆ ರಾಮ ಬರುವುದು 14 ವರ್ಷಕ್ಕಿಂತ ಒಂದು ದಿನ ತಡವಾದರೂ ಅಗ್ನಿಗೆ ಧುಮುಕುವುದಾಗಿ ಶಪಥಗೈದ.

ಅಯೋಧ್ಯೆ ಬರಿ ರಾಮನಾಳ್ವಿಕೆಯಿಂದ ಮಾತ್ರ ರಾಮರಾಜ್ಯವಾಗಲಿಲ್ಲ. ಭರತನಂಥ ನಿಷ್ಠ ಅಧಿಕಾರಿಯಿಂದಲೂ ಹೌದು. ರಾವಣನ ಸಂಹಾರಾನಂತರ ಅಯೋಧ್ಯಾ ನಗರಿಗೆ ಬಂದ ರಾಮ ಲಕ್ಷ್ಮಣ ಸೀತೆಯರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಷ್ಟು ವೈಭವೋತೀತವಾಗಿ ವಿರಾಜಿಸುವಂತೆ ಕಾಯ್ದವನು ಭರತ. ರಾಮನಿಗೆ ಜನತೆಯ ಈ ಪರಿ ಸಂಭ್ರಮ ಹಾಗು ರಾಜ್ಯ ನಿರ್ವಹಣೆ ಬಿಟ್ಟು ಇನ್ನೇನು ಬೇಕಿತ್ತು ಆತ್ಮಾನಂದ ಪಡಲು, ಅಲ್ಲವೆ?

ರಾಮಾಯಣದ ಇಂಥಾ ಮಹಾನ್ ವ್ಯಕ್ತಿತ್ವವೊಂದು ಜನಮನದಿಂದ ಕಣ್ಮರೆಯಾಗಿ ಹೋಗಿದೆ. ರಾಮನನ್ನೇ ಆಡಿಕೊಳ್ಳುವ ಈ ಕಾಲದಲ್ಲಿ, ಭರತನನ್ನು ಸ್ಮರಿಸುವ ಔದಾರ್ಯ ಹೇಗೆ ಬರಬೇಕು ಹೇಳಿ. ಹಾಗೆ ಭರತ ಎಂಬ ಮೌಲ್ಯ ನಮ್ಮಿಂದ ಮರೆಯಾಗದಿರಲೆಂದು ಆದಿ ಶಂಕರರು ಹೃರಿಕೇಶದಲ್ಲಿ ಭರತ ಮಂದಿರ ನಿರ್ಮಿಸಿದರು. ಅವರೇ ಕೇರಳದಲ್ಲೂ ಮತ್ತೊಂದು ಭರತ ಮಂದಿರ ಸ್ಥಾಪಿಸಿದರು.

ಅವರ ಆಶಯ ನಿಶ್ಫಲವಾಗದಿರಲಿ. ಜಗತ್ತಿಗೇ ಮಾರ್ಗಸೂಚಿಯಾಗಿರುವ ರಾಮಾಯಣದ ಈ ಪಾತ್ರ ಸದಾ ಕಣ್ಮುಂದೆ ವಿರಾಜಿಸುತ್ತಿರಲಿ. ಭರತನ ಆದರ್ಶ ನಮ್ಮಲ್ಲಿ ತುಂಬುವಂತೆ ಭಗವಂತ ಹರಸಲಿ....

ನಾದೀ.

ಪ್ರೇಯಸಿಯ ಕೊರಳಿಗೆ ನಂಬಿಕೆಯೇ ತಾಳಿ

ಅದು ಬೇಸಿಗೆ. ಅಂದು ಬೆಳಗ್ಗೆಯೆಲ್ಲಾ ವಿಪರೀತ ಬಿಸಿಲಿತ್ತು. ಆ ಕಾವನ್ನು ದಮನ ಮಾಡುವಂತೆ ಆಕಾಶ ಸಂಜೆ ಮಳೆ ಸುರಿಸಿತು.ಕೆಲ ಜನ ಈ ಅಕಾಲಿಕ ಮಳೆಯನ್ನು ಶಪಿಸಿದರು, ಕೆಲವರು ಖುಷಿಪಟ್ಟರು. ಮಳೆಬಂದು current ಹೋಯಿತೆಂದು ಕೆಲವರು ಗೊಣಗಿದರು. 1st floor ಮನೆಯಲ್ಲಿದ್ದ ದಿಲೀಪ ಕಿಟಕಿಯ ಸರುಗಳಿಂದ ಸಿಡಿಯುತ್ತಿದ್ದ ಇರಿಚಲಿಗೆ ಬೆನ್ನು ಕೊಟ್ಟು ಅರಾಮ್ ಕುರ್ಚಿಯಲ್ಲಿ ಸಿಗರೇಟು ಸೇದುತ್ತಾ ಕೂತಿದ್ದ. ಅವನಿಗೆ ಜಗತ್ತೇ ಜಡವಾದ ಹಾಗಿತ್ತು.

ಶೀಲಳಿಗೂ ಅಷ್ಟೆ. ಜಿನುಗುವ ಮಳೆಯ ನಿನಾದ ಈ ಹಿಂದಿನಂತೆ ಮುದವಾಗಿ ತೋರುತ್ತಿಲ್ಲ. ಅವಳಿಗೆ ಈ ಬಾರಿ ಮಳೆಯಲ್ಲಿ ನೆನೆಯಲು ಮನಸ್ಸೇ ಇಲ್ಲ. ಎಲ್ಲವೂ ಶೂನ್ಯವಾಗಿದೆ. ಯಾವುದೂ ಬೇಕಿಲ್ಲ. ಕಿಟಕಿಯಿಂದ ಆಚೆಗೆ ಕಾಣುತ್ತಿದ್ದ ಬೆಳಕಿಗೆ ಹೊಳೆಯುವ ಮಳೆಹನಿಗಿಂತ ಕಿಟಕಿ ಮುಂದೆ ಕತ್ತಲಲ್ಲಿ ಕೂತಿ‌ದ್ದ ದಿಲೀಪನೆ ಸುಂದರಾವಾಗಿದ್ದ. ಆದರೆ ಅವಳಿಗೆ ಅವನ ಮುಖ ಅಸ್ಪಷ್ಟವಾಗಿದ್ದು, ಸಿಗರೇಟಿನ ತುದಿ ಉಗುಳುತ್ತಿದ್ದ ಹೊಗೆ ಚಿತ್ರ ವಿಚಿತ್ರ ಆಕೃತಿಗಳಿಂದ ಸ್ಪಷ್ಟವಾಗಿ ತೋರುತ್ತಿತ್ತು.

ಇಬ್ಬರ ಮನಸ್ಸು ಯಾಕೋ ಮೌನವನ್ನೆ  ಇಷ್ಟ ಪಟ್ಟಂತಿತ್ತು. ಇಬ್ಬರಿಗು ಶಬ್ಧ ಅಸಹನೀಯವಾಗಿತ್ತು. ಆ ಚಿಟಪಟ ಸದ್ದು disturb ಮಾಡಿದ ಹಾಗೆ ಭಾಸವಾಗುತ್ತಿತ್ತು. ಆ ಮನೆಯಲ್ಲಿ ಅವರಿಬ್ಬರೆ ಇದ್ದದ್ದು. ಒಬ್ಬರ ಮುಖ ಒಬ್ಬರು ನೋಡಿಕೊಳ್ಳಲು  ವಾಕರಿಕೆ ಬರುವಷ್ಟು ಹಳತಾದ ಹಾಗಿತ್ತು. ಅದರು ಸಂಧಿಸಿದ್ದ ಅವರ ದೃಷ್ಠಿಗಳು ಕಣ್ಣನಗಲಿರದಾದವು. ಆ ಕಣ್ಣುಗಳೊಳಗೆ ಹಳೆ ಕಥೆ ವಿಸ್ತೃತವಾಯಿತು...

ದಿಲೀಪು ಶೀಲ ಭಲೆ ಜೋಡಿ. officeಗೆ ಸೇರಿದ ಸ್ವಲ್ಪ ದಿನಗಳಲ್ಲೇ ಈ ಹೆಗ್ಗಳಿಕೆ ಅವರ ಪಾಲಿಗೆ ಬಂದಿತ್ತು. ಅಗಾಧ ಪ್ರೇಮವಿದ್ದೂ ಸಹ ಎಂದೂ ಹದ್ದು ಮೀರಿದವರಲ್ಲ ಇವರಿಬ್ಬರು. ಸಮಸ್ಥಿತಿಯನ್ನು ಎಲ್ಲಾ ಸಮಯದಲ್ಲೂ ಕಾಯ್ದುಕೊಳ್ಳುತ್ತಿದ್ದರು. ಹಾಗಾಗಿಯೇ, ಎಂಥಾ ಕಷ್ಟದ ಸ್ಥಿತಿಯಲ್ಲೂ ಒಬ್ಬರ ಮೇಲೂ ಕೋಪ ಬೇಸರವಿಲ್ಲದೆ, ನಗು ನಗುತ್ತಾ ಸಸ್ನೇಹದಿಂದಿರುತ್ತಿದ್ದರು.

ಅದೇ ಆಫೀಸಲೊಬ್ಬ ಕೀಚಕನಂಥವನಿದ್ದ. ಸ್ವಲ್ಪ ದಿನಗಳ ನಂತರ ಶೀಲ ದಿಲೀಪ ಬೇರೆ ಬೇರೆ department ಆದಾಗಿನಿಂದ ಆ ಕೀಚಕನ assistant ಆಗಿ ಶೀಲ ಬಡ್ತಿ ಪಡೆದಳು. ಆ ಕೀಚಕನ ಬಗ್ಗೆ ಇಡೀ ಆಫೀಸಿಗೆ ಗೊತ್ತಿತ್ತು, ದಿಲೀಪನಿಗೂ ಸಹ. ಆದರೆ ಅವನ ಮೇಲಿನ ಅನುಮಾನಕ್ಕಿಂತ ಶೀಲಳ ಮೇಲಿನ ನಂಬಿಕೆಯೇ ಸಾವಿರ ಪಟ್ಟು ಹೆಚ್ಚಿತ್ತು. ಈ ವಿಷಯ ಅವರ ನಡುವೆ ಪ್ರಸ್ತಾಪವೇ ಆಗಿರಲಿಲ್ಲ, ರಮೇಶ ಬಂದು ದಿಲೀಪನ ಕಿವಿ ಚುಚ್ಚವ ವರೆಗು.

ರಮೇಶ ಅದೇನು ಹೇಳಿದ್ದನೋ ಏನೋ, ಶೀಲಳನ್ನು ಕಂಡರೆ ದಿಲೀಪ ಸಿಟ್ಟು ಸಿಟ್ಟಾಗುತ್ತಿದ್ದ. ಅವಳ ಪ್ರತಿ ನಡತೆಯನ್ನೂ ಪ್ರಶ್ನಿಸುತ್ತಿದ್ದ. ಶೀಲಳಿಗೂ ಇದು ಅತಿರೇಕವೆನಿಸಿದರು ತುಟಿ ಎರಡು ಮಾಡದಂತಿರುತ್ತಿದ್ದಳು. ಅವಳ ಈ ಮೌನ ದಿಲೀಪನನ್ನು ಇದ್ದೀದ್ದೂ ರೇಗಿಸುತ್ತಿತ್ತು. ಕಲಹ ಮಾಮೂಲಿಯಾಗಿ ಹೋಯ್ತು, ಇಬ್ಬರಿಗೂ ಸಾಕಾಗಿ ಹೋಯ್ತು. ಕೊನೆಗೆ ಶೀಲ ಇದಕ್ಕೆ ಪರಿಹಾರವೇನು ಎಂದು ಯೋಚಿಸಿ ಉತ್ತರ ಸಿಗದೆ ದಿಲೀಪನಿಗೆ 'ನೀನು ನನ್ನನ್ನು ನಂಬಬೇಕು, ಮತ್ತೆಂದೂ ಅನುಮಾನಿಸ ಬಾರದು, ಇಂಥ ದ್ವಂದ್ವಾರ್ಥದ ಮಾತುಗಳನ್ನ ಇನ್ನೆಂದೂ ಆಡಲೆಬಾರದು, ಇದಕ್ಕೆ ನಾನೇನು ಮಾಡಬೇಕು ಹೇಳು?' ಎಂದಳು. ದಿಲೀಪ ನಿರ್ವಿಕಾರವಾಗಿ ನಿಸ್ಸಂಕೋಚವಾಗಿ ಹೇಳಿದ್ದು ಒಂದೇ ಮಾತು 'ನನ್ನ ಪಕ್ಕ ಮಲಗ್ತೀಯ ಇವತ್ತು?' ಅಂತ. ಆಗಲೇ, ಸಂಜೆ ಮಳೆಯ ಸಿಡಿಲು ಕೇಳಿಸಿದ್ದು.

ಕತ್ತಲು ಕವಿಯುವ ಮುನ್ನವೇ ಎರಡೂ ದೇಹಗಳು ಬೆತ್ತಲಾದವು. ಒಬ್ಬರ ಬಾಹುವಿನೊಳಗೊಬ್ಬರು ಹೂತುಹೋದರು. ಲಲಾಟ, ಕಪೋಲ, ಅಕ್ಷ, ವಕ್ಷಸ್ಥಳ, ಕುಚ, ಜಿಹ್ವಗಳಿಗೆಲ್ಲ ಚುಂಬನದ ಲೇಪನವಾಯಿತು. ಸರ್ವಾಂಗ ಪೂಜೆ ಸಂಜೆ ಹೊತ್ತಿಗೆ ಮುಗಿಯಿತು. ಇಬ್ಬರಿಗೂ ನವಾನುಭವ ನಿರ್ಭಾವ ಮೂಡಿಸಿತು. ಎಲ್ಲಾ ಮುಗಿದ ಬಳಿಕ ಶೀಲಳಿಗೆ 'ಪ್ರೀತಿಯ ಇರುವೆಕೆಗೆ ಇದೇನಾ ಪರೀಕ್ಷೆ?!' ಅಂತ ಜಿಜ್ಞಾಸೆ ಮೂಡಿತು. ಮುಚ್ಚು ಮರೆಯಿಲ್ಲದ ಪ್ರೀತಿಗೆ ಇಂಥಾ practicals ಬೇಕಿತ್ತ ಅನ್ನೋ ಯೋಚನೆಯಲ್ಲಿ ದಿಲೀಪನಿಗೂ ತಾನು ಮಾಡಿದ್ದು ಶುದ್ಧ ಅಪರಾಧವೆಂಬ ಪಾಪ ಪ್ರಜ್ಞೆ ಕಾಡಲು ಶುರು ಮಾಡಿತು. ಅದೇ ಯೋಚನೆಯಲ್ಲೇ ಸಿಗರೇಟು ಸೇದುತ್ತಾ, ಶೀಲಳ ಅಸ್ತವ್ಯಸ್ತ ವಸ್ತ್ರದ ವಿನ್ಯಾಯಸದ ನಡುವೆ ಕಾಣುವ ದೇಹ ಸಿರಿ ನೋಡುತ್ತಾ ಕುಳಿತ.

ಮದನ ಮಾದಕತೆ ಆಸ್ವದಿಸುವ ನಡುವೆ ಶೀಲ ಕೇಳಿದ ಒಂದು ಸಂದೇಹ ದಿಲೀಪನ ಕಾಮಕ್ಕೆ ಪೂರ್ಣವಿರಾಮ ಹಾಕಿತ್ತು. 'ಇದೆಲ್ಲಾ ಅದ ಮೇಲು ನನ್ನನ್ನು ಮುಂಚಿನಂತೆಯೇ ಪ್ರೀತಿಸುತ್ತೀಯಾ? ಅದು ಸಾಧ್ಯವ? ಈ ದೇಹದ ಮೇಲಿನ ಮೋಹ-ಕುತೂಹಲ ಮುಗಿದ ಮೇಲು ಇದೇ ತರಹ ಉನ್ಮತ್ತ ಪ್ರೀತಿ ತೋರಿಸುತ್ತೀಯಾ? ನನ್ನ ಈ ಸಮ್ಮತಿ ನಿನಗೆ  ಲಜ್ಜೆಗೇಡಿತನವಾಗಿ ಕಾಣುತ್ತಿದೆಯೋ ಅಥವಾ ಪ್ರೇಮದ ಕುರುಹುವಿನಂತೆ ಕಾಣುತ್ತಿದೆಯೋ? ಈ ದೇಹಗಳ ಬಳಕೆಯೇ ಪ್ರೀತಿಯ ಉನ್ನತ ಸ್ಥಿತಿಯ ಚಿಹ್ನೇನಾ....? ಇಷ್ಟೇ ಸಾಕಾ ಮತ್ತೂ ಏನಾದರು ಮಾಡಿ ನಿನ್ನ ಬಿಟ್ಟು ಬೇರಾರ ಸಂಪರ್ಕಕ್ಕೂ ಹೋಗೊಲ್ಲ ಅಂತ prove ಮಾಡಬೇಕ?' ಎಂಬ ಪ್ರಶ್ನೆ ದಿಲೀಪನನ್ನು ಕುಸಿಯುವಂತೆ ಮಾಡಿತು. ಇಷ್ಟು ಹೊತ್ತು ಆನಂದ ಶಿಖರದ ಅಂಚಿನಲ್ಲಿದ್ದವನು ಆ ಪ್ರಶ್ನೆಗೆ ತಲೆ ತಿರುಗಿ ಧರೆಗುರುಳಿ ಬಿದ್ದ. ಇನ್ನೂ ಅದನ್ನೇ ಯೋಚಿಸುತ್ತಿದ್ದಾನೆ. ಶೀಲ ಮಾತ್ರ ತನ್ನ ಹೆಸರಿಗೆ ವಿರೋಧ ಸ್ಥಿತಿಯಲ್ಲಿದ್ದರೂ ಯಾವುದೋ ದೈವಿಕ ಕಾರ್ಯದಲ್ಲಿ ಭಾಗವಹಿಸಿದವಳಂತೆ ತೃಪ್ತಳಾಗಿದ್ದಾಳೆ. ಬಹುಶಃ ದಿಲೀಪನ ಈ ಚಿಂತಾಕ್ರಾಂತ ಮುಖ ಕತ್ತಲಲ್ಲಿ ಕಾಣುತ್ತಿಲ್ಲವಲ್ಲ ಹಾಗಾಗಿ ಅವಳಿಗೆ ಅದೇನೂ ಗೊತ್ತಾಗುತ್ತಿಲ್ಲ.

ಬಹಳ ಹೊತ್ತು ಅಲುಗಾಡದೆ ಸುಮ್ಮನೆ ಕುಳಿತಿದ್ದ ದಿಲೀಪ ಎದ್ದು ಶೀಲಳಿದ್ದ ಮಂಚದ ಮೇಲೆ ಕುಳಿತ. ಶೀಲ ಇನ್ನೊಮ್ಮೆ  ಕಾಮನಾಟ ಶುರುವೇನೋ ಎಂದುಕೊಂಡು ಹೊದಿಕೆ ತೆಗೆಯಲು ಅಣಿಯಾದಳು. ದಿಲೀಪ ಶೀಲಳ ಕೈ ಹಿಡಿದು, ಕಾಣುತ್ತಿದ್ದ ಅರೆ ನಗ್ನ  ದೇಹವನ್ನು ಆ ಹೊದಿಕೆಯಿಂದ ಮುಚ್ಚಿದ. ಶೀಲಗೆ ತುಸು ನೆಮ್ಮದಿ. ಮುಖದ ಹತ್ತಿರ ಬಂದ. ಶೀಲಳ ತುಟಿ ಅರಳಿತು. ದಿಲೀಪನ ತುಟಿ ಮುತ್ತಿಟ್ಟಿದ್ದು ಅರಳಿದ ತುಟಿಗಲ್ಲ, ಹಣೆಗೆ. ಬಿಗಿದಪ್ಪಿಕೊಂಡ. ಅವಳ ಕಿವಿಗೆ ಮಾತ್ರ ಕೇಳುವಂತೆ, 'ನನಗಿದೆಲ್ಲಾ ಬೇಕಿಲ್ಲ.
ನೀನೋಬ್ಬಳೆ ಸಾಕು. ಈ ಕ್ಷಣಿಕ ಸುಖ ನಿನ್ನ ಅಪರಿಮಿತ ಪ್ರೀತಿಗೆ ಸಾಕ್ಷಿಯಾಗಲು ಸಾಧ್ಯವೇಇಲ್ಲ. ಇನ್ನು ನಾವಿಬ್ಬರು ಬರಿ ಪ್ರೇಮಿಗಳಲ್ಲ. ನಾಳೆ ಬೆಳಗ್ಗೆಯೇ ನಿನ್ನ ಕೊರಳಿಗೆ ತಾಳಿ ಕಟ್ಟುತ್ತೇನೆ. ಈ ಸುಖ ಸುಖವಲ್ಲ. ನಿನ್ನ ಸಂಗಾತವಿದ್ದಾಗ ಆಗುವ ಆನಂದದ ಮುಂದೆ ಈ ಬೆತ್ತಲೆ ಪೂಜೆ ಏನೇನೂ ಅಲ್ಲ. ನನ್ನ ಆತುರವನ್ನ ಕ್ಷಮಿಸಿಬಿಡು. ನಾಳೆಯಿಂದ ಗಂಡಹೆಂಡಿರಾಗಿದ್ದು ಬಿಡೋಣ. ಮನೆಯವರು ಏನಾದರೂ ಮಾಡಿಕೊಂಡು ಕೂಗಾಡಲಿ. ನಮ್ಮ ಪ್ರೇಮಕ್ಕೆ ಹೊಸ ಥರದ permission ಕೊಡೋಣ. ನಾವಿಬ್ಬರು ಹಣದ ವಿಷಯದಲ್ಲಿ indipendent. ಅದೊಂದೇ ಸಾಕು, ನಮ್ಮ ಮನೆಯವರಿಗೆ ನಾವು ಭಾರವಲ್ಲ ಎಂಬುದಕ್ಕೆ. ಹೇಳು, ಮದುವೆ ಆಗೋಕೆ ನೀನು readyನಾ?'. ಶೀಲ ಮಾತಾಡಲಿಲ್ಲ. ಬದಲಿಗೆ ಅಪ್ಪುಗೆಯನ್ನ ಬಿಗಿ ಮಾಡಿದಳು. ದಿಲೀಪ ಮತ್ತೂ ಅಪ್ಪಿಕೊಂಡ. ದಿಲೀಪನ ಖಾಲಿ ಬೆನ್ನಿನ ಮೇಲೆ ಶೀಲಳ ಕಣ್ಣೀರು ನರ್ತಿಸಿತು. ಅದರ ಬೆಚ್ಚಗಿನ ಪುಳಕ ದಿಲೀಪನಿಗೂ ಕಣ್ಣೀರು ತರಿಸಿತು. ಇವರಿಬ್ಬರ ಇಂಥ ಪ್ರೇಮಧಾರೆ ಸುರಿವಾಗ ನನಗೇನು ಕೆಲಸ ಎಂದುಕೊಂಡು ಮುಗಿಲು ತನ್ನ ವರ್ಷಧಾರೆ ನಿಲ್ಲಿಸಿತು. ಆ ದಿನ ಪೂರ್ತಿ ಮಂಚ ಮತ್ತೆ ಕೀರಲು ದನಿ ಹೊರಡಿಸಲಿಲ್ಲ.....

ನಾದೀ

ಸಾಕ್ಷಾತ್ಕಾರ

ಮೌನ
ಮೌನ
ಮೌನ
ನೀರವ ಮೌನ. ತಂಗಾಳಿಯ ಸದ್ದೂ ಇಲ್ಲ, ಎಲೆಗಳ ಸದ್ದೂ ಇಲ್ಲ. ನಡುರಾತ್ರಿಯಾಗಿದೆಯಲ್ಲ, ಹಾಗಾಗಿ ಖಗ ಮೃಗಗಳ ಸದ್ದೂ ಇಲ್ಲ. ಏನೋ, ಅಮವಾಸ್ಯೆ ಬೇರೆ ಇದೆಯಲ್ಲ, ಚಂದ್ರ ಕಾಣುತ್ತಿಲ್ಲ ಎಂಬ ದುಃಖಕ್ಕೋ ಏನೊ ಈ ದಿನ ಕಾವೇರಿ ಕೂಡ ಮೌನವಾಗಿಯೇ ಗಾಮಿಸುತ್ತಿದ್ದಾಳೆ. ಅವಳ ದಡದಲ್ಲಿ ಕಾವಿ ಧರಿಸಿರುವ ಯೌವನ ಭರಿತ ಸುಂದರ ಯುವತಿಯೊಬ್ಬಳು ನೀರಲ್ಲಿ ಕಾಲಿಟ್ಟು ನಿಂತಿದ್ದಾಳೆ. ಹಿಂದೆ ಸ್ವಲ್ಪ ದೂರದ ಬಂಡೆಯಲ್ಲಿ, ದಾಡಿ ಬಿಟ್ಟಿರುವ ಸಂತನೊಬ್ಬ ಕೂತಿದ್ದಾನೆ.

ಗಾಳಿಗೆ ಹಾರುತ್ತಿದ್ದ ನೀಳ ಕೂದಲನ್ನು ಗಂಟುಕಟ್ಟಿಕೊಂಡು ಸಂತನ ಬಳಿ ಕೂತಳು. ಸಂತನಿಗೆ.ಅವಳು ಬಂದದ್ದು ಗೊತ್ತಾಗಿ ಕಣ್ಣರಳಿಸಿದ. ಪ್ರಸನ್ನತೆ ಇಬ್ಬರಲ್ಲೂ ಎದ್ದು ಕಾಣುತ್ತಿತ್ತು. 'ಮಗು, ನಿನ್ನ ನಿರ್ಧಾರ ಸರಿಯಾಗಿಯೇ ಇದೆ. ಆದರೂ ಮತ್ತೊಮ್ಮೆ ಯೋಚಿಸು. ಒಮ್ಮೆಗೇ ಇಂಥ ನಿರ್ಣಯ ಒಳಿತಲ್ಲ. ನಿನ್ನಂಥ ಹೂ ಸ್ವಭಾವದ ಹೆಣ್ಣು ಬದುಕುವುದು ಅಷ್ಟು ಸುಲಭವಲ್ಲ' ಎಂದು ತಲೆ ಸವರುತ್ತಾ ಹೇಳಿದನು ಸಂತ. ಈ ಹುಡುಗಿ ಮಾತ್ರ ಹಸನ್ಮುಖಿಯಾಗಿಯೇ ಇದ್ದಳು. 'ಇಷ್ಟು ದಿನ ಆಶ್ರಮದ ಸೇವೆ ಮಾಡಿ ನೋಡಿದ್ದೀಯಲ್ಲ, ಹೆಸರಿಗೆ ಮಾತ್ರ ಸರ್ವ ಸಂಗ ಪರಿತ್ಯಾಗಿಗಳು ನಾವು, ಆದರೆ ಮತ್ತೊಬ್ಬರ ನೆರವಿಲ್ಲದೆ ಒಂದು ದಿನವೂ ಇರಲಾರೆವು. ಎಲ್ಲರೂ ಕಾಣುವಂತೆ ನಮ್ಮ ಕಾಲಿಗೆ ಬಿದ್ದರೆ, ನಾವು ಇನ್ನೊಂದು ರೀತಿ ಕಾಲಿಗೆ ಬೀಳುತ್ತಿದ್ದೇವೆ. ಯಾವ ಉದ್ದೇಶಕ್ಕೆ ಈ ಕಾವಿ ಧರಿಸುತ್ತೇವೋ ಅದಕ್ಕೆ ವಿರುದ್ಧವಾದದ್ದನ್ನೇ ಮಾಡಬೇಕಾದ ಅನಿವಾರ್ಯತೆ ಇದೆ. ಹೇಳು, ಇದೆಲ್ಲ ನಿನಗೆ ಬೇಕಾ?' ಸಂತನ ಮಾತಿಗೆ ಮತ್ತದೇ ನಗು. 'ಸಂಸಾರದ ಮೇಲೆ ಜಿಗುಪ್ಸೆ ಬಂದು, ಅದು ಬೇಡ ಅಂತ ಕಿತ್ತೊಗೆದು ನಾವು ಸನ್ಯಾಸಿಗಳಾದರೆ ಜನಗಳು ದಂಡು ದಂಡಾಗಿ ಬಂದು ಸಾಂಸಾರಿಕ ಸಮಸ್ಯೆಗೆ ನಮ್ಮಿಂದ ಪರಿಹಾರ ಕೇಳುತ್ತಾರೆ. ಯಾವುದನ್ನ ಬೇಡ ಎಂದು ತಿಪ್ಪೆಗೆಸೆದು ಬಂದೆವೋ ಅದನ್ನೇ ಹೂಬುಟ್ಟಿಯಲ್ಲಿ ಹೊತ್ತು ತಂದು ಸಮರ್ಪಿಸುತ್ತಾರೆ. ಒಂಥರ ನಾವೂ dustbin ಆಗಿ ಬಿಡುತ್ತೇವೆ. ಇದೆಲ್ಲ ಬೇಕಾ ನಿನಗೆ?'. ಇಬ್ಬರೂ ನಕ್ಕರು. 'ಸರಿ ಇದೆಲ್ಲಾ ಬಿಡು. ನೀನು ಯಾಕಾಗಿ ಈ ಸನ್ಯಾಸ ಬಯಸುತ್ತಿದ್ದೀ? ದೇವರನ್ನು ನೋಡಬೇಕು ಅಂತಲೆ?'
ಸಂತನ ಪ್ರಶ್ನೆಗೆ ಇಲ್ಲ ಎಂದು ತಲೆಯಾಡಿಸಿದಳು ಯುವತಿ. 'ಮತ್ತೇನು ಜನರಿಗೆ ಸಾಂತ್ವಾನ ಹೇಳಲೇ?' ಮತ್ತೆ ತಲೆ ತಿರುವಿದಳು.
'ಇನ್ನೇನು, ದುಡ್ಡು ಮಾಡೋ ಆಸೆಗೆ ಬಂದೇನಮ್ಮ? ಎಲ್ಲಾ ಆಶ್ರಮಗಳಿಗೂ ದುಡ್ಡು ಸಿಗಲ್ಲ. ನಮ್ಮದು ಒಂದು ಜಾತಿ ಪಂಗಡ ಅಂತ ಸೀಮಿತವಾಗಿಲ್ಲದ ಮಠ, ಹಾಗಾಗಿ ಇಲ್ಲಿ ಹಣದ ಕೊರತೆಯಿದೆ. ದುಡ್ಡಿಗಾಗಿ ಸನ್ಯಾಸಿಯಾಗ್ತೀಯಾ?' ಅಂದ ಸಂತ. ಸದ್ದಿಲ್ಲದೆ ಜೋರಾಗಿ ನಕ್ಕು ಮತ್ತೆ ತಲೆ ತಿರುವಿದಳು.

'ಹಣಕ್ಕಾಗಿಯಲ್ಲ, ಆಧ್ಯಾತ್ಮಕ್ಕಾಗಿಯಲ್ಲ, ಲೋಕ ಕಲ್ಯಾಣಕ್ಕೂ ಅಲ್ಲವೇ...? ಇಷ್ಟನ್ನೂ ಮೀರಿಯೂ ಬೇರೆ ಕಾರಣವಿದೆಯೆ? ಏನಮ್ಮ ಅದು? ಯಾರಿಗಾಗಿ ಈ ತೀರ್ಮಾನ?' ಸಂತ ಉತ್ತರಕ್ಕಾಗಿ ಕಾಯುತ್ತಿದ್ದ. ಯುವತಿ ಮುಖದಲ್ಲ ಗಂಭೀರ ಮುದ್ರೆ ಧರಿಸಿ ಈ ಸಂತನ ಕಡೆ ಬೆರಳು ಮಾಡಿದಳು! ಸಂತ ಗಾಬರಿಯಾದ. 'ಏನೂ ನನಗಾಗಿಯೇ...??' ಹೌಹಾರಿದ. ಆ ಯುವತಿ ಮತ್ತೆ ನಕ್ಕಳು.

ಈ ಹುಡುಗಿ ಮೂಗಿ. ಕಣ್ಸನ್ನೆಯಲ್ಲೇ ಎಲ್ಲಾ ಮಾತಾಡುತ್ತಾಳೆ. ಕೆಂಪು ಕೆನ್ನೆಯ, ಬಿಳುಪು ಮೈಯ, ಹೊಳಪು ಕಂಗಳ ರೂಪಸಿ. ಹೌದು, ನಿಜಕ್ಕೂ ರೂಪ ಅಸಿ. ಕಳೆದ ಒಂದು ತಿಂಗಳಿಂದ ಕಾವೇರಿ ನದಿ ತಟದಲ್ಲಿದ್ದ ಈ ಆಶ್ರಮದಲ್ಲಿ ವಾಸವಿದ್ದಾಳೆ, ಎಲ್ಲಾ ಸೇವೆಗಳನ್ನು ಸ್ವತಃ ಮಾಡುತ್ತಾಳೆ. ಅವಳು ಬಂದಾಗಿನಿಂದ ಉತ್ಸಾಹಿ ಯುವಕರ ದಂಡು ಸ್ವಯಂ ಸೇವೆ ಮಾಡಲು ಮುಗಿಬಿದ್ದಿದ್ದಾರೆ. ಆದರೆ ಇವಳು ಎಲ್ಲರಂಥವಳಲ್ಲ. ತನ್ನ ದಿನಚರಿಯ ಅರ್ಧ ದಿನ ಆ ಸಂತನ ಸೇವೆಯಲ್ಲಿ ಕಳೆಯುತ್ತಾಳೆ.

ಇಂದು ಬೆಳಗ್ಗೆ ಸಂತನಿಗೆಂದು ತಂದಿದ್ದ ಕಾವಿ ಬಟ್ಟೆಯನ್ನ ಮೈಮೇಲೆ ಹೊದ್ದು ನಿಂತಳು ಈ ಹುಡುಗಿ. ಆಗ ಸಂತ ಸುಮ್ಮನೆ ಕೇಳಿದ, 'ಏನು ಮಗು, ಸಂತನ ಸಹವಾಸ ಮಾಡಿ ನಿನಗೂ ಸನ್ಯಾಸದ ಆಸೆ ಚಿಗುರಿತೆ?' ಎಂದು. ಹೌದು ಎಂಬಂತೆ ಜೋರಾಗಿ ತಲೆಯಾಡಿಸಿದಳು ಯುವತಿ. ಕಣ್ಗಳಲಿ ಭಾವೋನ್ಮತ್ತತೆ ಉಕ್ಕಿದಂತಿತ್ತು. ಸಂತ ಇದನ್ನು ಗಂಭೀರವಾಗಿ ಪರಿಗಣಿಸಿ, ಅವಳಿಗೆ ಖುಷಿಯಾಗಲೆಂದು ಕಾವಿ ವಸ್ತ್ರ ಕೊಟ್ಟು, 'ರಾತ್ರಿ ಮಾತಾಡೋಣ ಬಾ..' ಎಂದು ಹೇಳಿದ್ದ. ಈಗ ನೋಡಿದರೆ ತನಗಾಗಿ ಸನ್ಯಾಸಿಯಾಗುತ್ತೇನೆ ಅನ್ನುತ್ತಿದ್ದಾಳೆ!!!

'ನಾನಾ...?
ನಾನಾ ಕಾರಣ ನೀನು ಸನ್ಯಾಸಿನಿಯಾಗಲು. ನನ್ನಿಂದ ಅಂಥಾ ಪ್ರಭಾವ ಬೀರಲು ಸಾಧ್ಯವಿಲ್ಲ. ನಿಜ ಹೇಳು, ಯಾಕಾಗಿ ಈ ಮಾತು ಹೇಳಿದೆ? ಯಾಕಾಗಿ ಇಲ್ಲಿಗೆ ಬಂದೆ?' ಸಂತನ ಈ ಪ್ರಶ್ನೆಗೆ ಉತ್ತರಿಸುವಾಗ ನಗುವಿರಲಿಲ್ಲ ಅವಳ ಮುಖದಲ್ಲಿ.

ಏನನ್ನೋ ಹೇಳಬೇಕೆಂದು ಬಹಳ ಯತ್ನಿಸಿದಳು. 'ಅ.... ಆ...... ಆ.....' ಎಂಬ ಸ್ವರ ಹೊರಡಿತೇ ಹೊರತು ಒಂದೇ ಒಂದು ಪದ ಮೂಡಲಿಲ್ಲ. ತನ್ನ ದೌರ್ಬಲ್ಯದ ಕುರಿತಾಗಿ ಇದೇ ಮೊದಲ ಬಾರಿಗೆ ರೋದಿಸಿದಳು. ಒಮ್ಮೆ ತನ್ನನ್ನು ತೋರಿಕೊಳ್ಳುತ್ತಾ ಮತ್ತೊಮ್ಮೆ ಸಂತನನ್ನು ತೋರಿಸುತ್ತಾ ಏನೇನೋ ಕೈಯಾಡಿಸಿದಳು. ಹ್ಞೂ ಹ್ಞು ಯಾವುದೂ ಅರ್ಥವಾಗಲಿಲ್ಲ. ನೆಲದ ಮೇಲೆ ಕುಸಿದು ಮುಗಿಲಿನೆಡೆಗೆ ಮುಖ ಮಾಡಿ ಓ ಎಂದು ಆಕ್ರಂದಿಸಿದಳು. ಇದೇ ಮೊದಲ ಬಾರಿ ಅವಳನ್ನು ಇಷ್ಟು ಭಾವೋದ್ವೇಗದಲ್ಲಿ ನೋಡಿದ ಸಂತ ಕಂಗಾಲಾದ. ಅವಳ ಆ ಶೋಕ ಮೂಗತ್ವ ಇಷ್ಟು ದೊಡ್ಡ ಶಾಪವೇ? ಎಂಬಂತಿತ್ತು.

ಇದ್ದಕ್ಕಿದ್ದಂತೆ ನಕ್ಕಳು ಹುಡುಗಿ. ಕಿರು ಬೆರಳಿನಿಂದ ನೆಲದ ಮೇಲೆ ಏನೋ ಗೀಚಿದಳು. ಸಂತನ ಬಳಿಗೋಡಿ ಕೈ ಹಿಡಿದು ಎಳೆ ತಂದು ತೋರಿಸಿದಳು. ಕತ್ತಲೆ ಬೇರೆ, ಏನು ಕಾಣಲಿಲ್ಲ ಸಂತನಿಗೆ. ಕಣ್ಣನ್ನು ಸಣ್ಣ ಮಾಡಿಕೊಂಡು ಮಂಡಿಯೂರಿ ಕೂತು ನೋಡಿದ. ಸ್ಪಷ್ಟವಾಗಿ ಕಂಡಿತು 'ನಾನು ನಿನ್ನ ಮಗಳು' ಅಂತ.

ಸಂತನಿಗೆ ಸಿಡಿಲು ಬಡಿದಂತಾಯ್ತು. ಇಷ್ಟು ದಿನ ಇಲ್ಲದ್ದು ಈಗ ಅವನಿಗೆ ಅವಳಲ್ಲಿ ತನ್ನೊಂದಿ ಹೋಲಿಕೆ ಕಂಡಿತು. 1 ವರ್ಷದ ಕೂಸಿದ್ದಾಗ ಮನೆ ಬಿಟ್ಟು ಸನ್ಯಾಸ ಸ್ವೀಕರಿಸಿದ್ದ ಈ ಸಂತ ಪುಟ್ಟ ಕಂದಮ್ಮಗಳ ದನಿ ಕೇಳಿದಾಗೆಲ್ಲ 'ನನ್ನ ಮಗುವೂ ಹೀಗೆ ಮುದ್ದಾಗಿ ಮಾತಾಡುತ್ತಿರುತ್ತಾ...'ಅಂತ ಯೋಚಿಸುತ್ತಿದ್ದ. ಈಗ 20 ವರ್ಷಗಳ ಬಳಿಕ ಗೊತ್ತಾಗಿದೆ ಆ ಮಗುವಿಗೆ ಮಾತೆ ಬರುತ್ತಿಲ್ಲ ಎಂದು. ತಿಂಗಳ ಹಿಂದೆ ಹೆಂಡತಿ ಸತ್ತ ಸುದ್ದಿ ಕೇಳಿ ಸಮಚಿತ್ತನಾಗಿದ್ದ ಸಂತ ಈಗ ಮಗಳನ್ನ ನೋಡಿ ತಡಬಡಿಸುತ್ತಿದ್ದಾನೆ.

'ನನಗಿೊಸ್ಕರ ಅಂದರೆ, ನನ್ನ ಜೊತೆಗಿರಲೆಂದಾ ನೀನು ಸನ್ಯಾಸ ಬೇಕು ಅಂತಿರೋದು?' ಕೇಳಿದ ಸಂತ. ಹ್ಞೂಗುಟ್ಟಿದಳು ಹುಡುಗಿ. ಹೌದು. ಈಗ ಮಗಳಿಗೆ ಬೇರೆ ಗತಿಯಿಲ್ಲ. ಅವಳ ಹೊಣೆ ನನ್ನದೆ. ಈಗಿರುವುದು ಎರಡೇ ಆಯ್ಕೆ. ಒಂದೋ ಅವಳಿಗೆ ಸನ್ಯಾಸ ನೀಡುವುದು, ಇಲ್ಲ ತಾನೇ ಸನ್ಯಾಸ ಬಿಡುವುದು. ಯಾವುದು ಸೂಕ್ತ ಈಗ?

ಸಂತನೇ ಎಷ್ಟೋ ಸಲ ಹೇಳಿದ್ದ ಹೆಣ್ಣು ಮಕ್ಕಳಿಗೆ ತಂದೆ ಮೇಲೆಯೆ ಒಲವು ಜಾಸ್ತಿ ಅಂತ. ಅದು ಅವನಿಗೆ ಈಗ ಅನುಭವಕ್ಕೆ ಬಂದಿದೆ. ಕಣ್ಣಿಂದ ಆನಂದ ಸುಧೆ ಹರಿದು ಹೋಗುತ್ತಿದೆ. ಬಿಕ್ಕಿಸಿ ಅಳುತ್ತಿದ್ದ ಮಗಳನ್ನು ಎದೆಗಾನಿಸಿಕೊಂಡ. 'ಮಗು, ನನಗಾಗಿ ನೀನು ನಿನ್ನ ಭವಿಷ್ಯವನ್ನೆಲ್ಲಾ ತ್ಯಾಗ ಮಾಡಲು ಮುಂದಾದೆಯಲ್ಲ, ನಿಜಕ್ಕೂ ನೀನೆ ಮುಕ್ತಳು. ಮೋಕ್ಷವೆಂಬ ಸ್ವಾರ್ಥಕ್ಕೆ ನಿಮ್ಮನ್ನೆಲ್ಲಾ ತೊರೆದು ಬಂದ ಪಾಪಿ ನಾನು. ನನ್ನ ತಪ್ಪನ್ನ ಕ್ಷಮಿಸಿಬಿಡಮ್ಮ. ನಿನಗೆ ಸನ್ಯಾಸತ್ವ ಬೇಡ, ನಾನೇ ಸನ್ಯಾಸತ್ವಕ್ಕೇ ಸನ್ಯಾಸ ನೀಡಿ ಇದ್ದುಬಿಡುತ್ತೇನೆ ನಿನ್ನೊಂದಿಗೆ. ನಾನು ನಿನಗೆ ತಂದೆಯಲ್ಲ. ನೀನೆ ನನಗೆ ತಾಯಿ' ಎಂದು ಕೈ ಮುಗಿದ. ಆ ಯುವತಿ ಕೈಗಳಿಗೆ ಮುತ್ತಿಟ್ಟು  ಮಡಿಲ ಮೇಲೆ ಮಲಗಿದಳು.

ಈಗಲೂ ಹೊರಗೆಲ್ಲ ಮೌನವೇ ಇತ್ತು. ಆದರೆ ಆ ಮಾಜಿ ಸಂತನ ಮನದಲ್ಲಿ ಹಳೇ ಹಾಡೊಂದು ಕೇಳುತ್ತಿತ್ತು.....
ಒಲವೇ ಜೀವನ ಸಾಕ್ಷಾತ್ಕಾರ.....
ಸಾಕ್ಷಾತ್ಕಾರ
ಸಾಕ್ಷಾತ್ಕಾರ

ನಾದೀ

kaanike

ಬಾನಲಿಂದು ಬಟ್ಟಲುರುಳಿ
ಚೆಲ್ಲಿದೆ ಕೆನೆ ಹಾಲು,
ಅದರ ಹೊಳಪು ಕಂಗೊಳಿಸಿದೆ
ನನ್ನವಳ ಕೆನ್ನೆ ಮೇಲು...

ಎಷ್ಟಾಳಕೆ ಧುಮುಕಿದರು
ತಳ ಕಾಣದ ಒಲವು,
ಹೊಸ ಪ್ರೇಮದ ಆಸ್ವದಕೆ
ತಡಕಾಡಿದೆ ಮನವು.
ಕ್ಷಣ ಕ್ಷಣಕು ಉಕ್ಕುತಲಿದೆ
ಕಣ್ಣೆದುರಿನ ಚೆಲುವು,
ನಿನ್ನೊಳಗಡೆ ನಾ ಸೇರಲು
ಸಾವಲಿ ಹೊಸ ಉಳಿವು...

ನವ ಚೈತ್ರದ ವನ ಚಿತ್ರದಿ
ನಿನ್ನ ರೂಪುರೇಖೆ,
ಹುಡುಕುತಲಿದೆ ಈ ನಯನವು
ಹಾಡಿ ಹೊಗಳಲ್ಕೆ.
ವನ ರಾಜಿಯ ಸುಮ ಜಾಜಿಯ
ಹೋಲಿಕೆ ನಿನಗೇಕೆ?
ಅನುಪಮದೀ ಅನುರಾಗಕೆ
ನನ್ನಾತ್ಮವೆ ಕಾಣ್ಕೆ...
ನನ್ನಾತ್ಮವೆ ಕಾಣ್ಕೆ.........

ನಾದೀ

ಊರ್ಮಿಳೆಯ ತಪಸ್ಸು!

ಊರ್ಮಿಳೆಯ ತಪಸ್ಸು..! ‘ಅಷ್ಟೇನಾ..? ಅಷ್ಟಾಕ್ಕೆ ಅಪ್ಪಾಜಿ ಹೀಗೆ ಚಿಂತಾಕ್ರಾಂತರಾದ್ರಾ? ಈಗೋ, ಇವತ್ತೇ, ಈಗಲೇ ಹೊರಟೆ. ನೀವೇನು ಯೋಚಿಸಬೇಡಿ. ಅಪ್ಪ ಕೊಟ್ಟ ಮಾತನ್ನ ...